ಕೆ.ಆರ್.ಪೇಟೆ ಪುರಸಭಾ ವ್ಯಾಪ್ತಿಯ ಶಹರಿ ರೋಜ್ಗಾರ್ ಯೋಜನಾ ಭವನ, ಹೇಮಾವತಿ ಜಲಾಶಯ ಯೋಜನಾ ಕಚೇರ ಹಾಗೂ ಕೆ.ಆರ್.ಪೇಟೆ ಪುರಸಭಾ ವ್ಯಾಪ್ತಿಯ ಹೊಸ ಹೊಳಲು ಗ್ರಾಮದ ಪ್ರೌಢಶಾಲಾ ಆವರಣ ಕೊಠಡಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಹೆಸರು ನೋಂದಣಿಗೆ ಸೇವಾ ಕೇಂದ್ರಗಳಿಗೆ ಇಂದು ಚಾಲನೆ ನೀಡಲಾಯಿತು.
ಆಯ್ದ ಫಲಾನುಭವಿಗಳ ಮೊಬೈಲ್ ಫೋನಿಗೆ ಬಂದಿರುವ ಎಸ್.ಎಮ್.ಎಸ್ ಪ್ರಕಾರ ಸಮೀಪದ ನೋಂದಣಿ ಕೇಂದ್ರದಲ್ಲಿ ಉಚಿತವಾಗಿ ಕುಟುಂಬದ ಯಜಮಾನಿಯ ಹೆಸರನ್ನು ನೋಂದಾಯಿಸಬೇಕು ಎಂದು ಪುರಸಭೆಯ ಮುಖ್ಯ ಅಧಿಕಾರಿ ಬಸವರಾಜು ಮನವಿ ಮಾಡಿದರು.
8147500500 ಮೊಬೈಲ್ ಸಂಖ್ಯೆಗೆ ಪಡಿತರ ಚೀಟಿಯ ಸಂಖ್ಯೆಯನ್ನು ಎಸ್ಎಂಎಸ್ ಮಾಡಿದಾಗ ಸಮೀಪದ ಯಾವ ಸೇವಾ ಕೇಂದ್ರಕ್ಕೆ ಹೋಗಿ ನಿಮ್ಮ ಹೆಸರನ್ನು ನೋಂದಾಯಿಸಬೇಕು ಎಂದು ಸಂದೇಶ ಬಂದಿರುತ್ತದೆ. ಈ ಸಂದೇಶದ ಅನ್ವಯ ಪುರಸಭೆಯಿಂದ ನಿಗದಿಪಡಿಸಿರುವ ಸೇವಾ ಕೇಂದ್ರಗಳು ಸೇರಿದಂತೆ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಸೇವಾ ಕೇಂದ್ರಗಳಿಗೆ ತೆರಳಿ ಗೃಹಲಕ್ಷ್ಮಿ ಯೋಜನೆಯ ಅಡಿ ಯಜಮಾನಿಯು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು..
ಗೃಹಲಕ್ಷ್ಮಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಲು ಆಗಮಿಸುವ ಫಲಾನುಭವಿಗಳು ನಿಮ್ಮ ಹಾಗೂ ನಿಮ್ಮ ಪತಿಯ ಆಧಾರ್ ಕಾರ್ಡ್ ಗಳು, ಬ್ಯಾಂಕ್ ಪಾಸ್ ಪುಸ್ತಕ, ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ತೆಗೆದುಕೊಂಡು ತಮ್ಮ ಹೆಸರನ್ನು ನೋಂದಾಯಿಸಬೇಕು ಎಂದು ಬಸವರಾಜು ಮನವಿ ಮಾಡಿದರು..
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಮಹಾದೇವಿ ನಂಜುಂಡ, ಪುರಸಭಾ ಕಚೇರಿಯ ವ್ಯವಸ್ಥಾಪಕ ಸೋಮಶೇಖರ್, ಕಂದಾಯಾಧಿಕಾರಿ ರವಿಕುಮಾರ್, ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನಾಧಿಕಾರಿ ಭಾರತಿ ಅನಂತಶಯನ, ಕಂಪ್ಯೂಟರ್ ಆಪರೇಟರ್ ರಶ್ಮಿ, ಹಾಗೂ ಪುರಸಭಾ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.