ಆಗಸ್ಟ್ 15 ರಿಂದ ಮಹಿಳೆಯರ ಉಚಿತ ಪ್ರಯಾಣ ಬಂದ್ ಆಗಲಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ, ಹಾಗಾದರೆ ನಿಜಕ್ಕೂ ಉಚಿತ ಪ್ರಯಾಣ ಸ್ಥಗಿತಗೊಳ್ಳುವುದೇ ? ಇಲ್ಲವೇ ಇಲ್ಲ. ಏಕೆಂದರೆ ಉಚಿತ ಬಸ್ ಪ್ರಯಾಣ ರದ್ದುಗೊಳಿಸುವ ಪ್ರಸ್ತಾಪ ಸರ್ಕಾರ ಮುಂದಿಲ್ಲ, ಆದ್ದರಿಂದ ಇಂತಹ ಸುದ್ದಿಗಳು ಕೇವಲ ಕಪೋಲಕಲ್ಪಿತ ಹಸಿ ಸುಳ್ಳುಗಳು ಎಂಬುದು ಸ್ಪಷ್ಟವಾಗಿದೆ.
ಕಾನೂನು ವಿದ್ಯಾರ್ಥಿಗಳು PIL ಸಲ್ಲಿಸಿದ ಕಾರಣ, ಹೈಕೋರ್ಟ್ ಉಚಿತ ಬಸ್ ಪ್ರಯಾಣವನ್ನು ಬಂದ್ ಮಾಡಿದೆ ಎಂದು ಸುಳ್ಳುಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಇದು ಅಪ್ಪಟ ಸುಳ್ಳು. ಅದ್ದರಿಂದ ಯಾರು ಇದನ್ನು ನಂಬುವ ಅವಶ್ಯಕತೆ ಇಲ್ಲ.
ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಬಸ್ ತುಂಬಿಹೋಗಿ ತಮಗೆ ತೊಂದರೆಯಾಗುತ್ತಿದೆ ಎಂದು ಕಾನೂನು ವಿದ್ಯಾರ್ಥಿಗಳು PIL ಸಲ್ಲಿಸಿರುವುದು ನಿಜ. ಆದರೆ ಹೈಕೋರ್ಟ್ ಆ ಅರ್ಜಿಯನ್ನು ಇನ್ನು ದಾಖಲು ಮಾಡಿಕೊಂಡಿಲ್ಲ ಮತ್ತು ವಿಚಾರಣೆ ಆರಂಭಿಸಿಲ್ಲ. ಜೊತೆಗೆ ಸಿಎಂ ಸಿದ್ದರಾಮಯ್ಯನವರು ಗ್ಯಾರಂಟಿಗಳ ಆಮಿಷವೊಡ್ಡಿ ಗೆದ್ದಿದ್ದಾರೆ ಎಂದು ಮತ್ತೊಂದು ಅರ್ಜಿ ದಾಖಲಾಗಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್ ಸಿದ್ದರಾಮಯ್ಯನವರಿಗೆ ನೋಟಿಸ್ ನೀಡಿದೆ ಅಷ್ಟೇ. ಅದರ ವಿಚಾರಣೆ ಸೆಪ್ಟೆಂಬರ್ 1 ರಂದು ನಡೆಯಲಿದೆ. ಹಾಗಾಗಿ ಈಗ ಬಸ್ ಪ್ರಯಾಣ ಬಂದ್ ಎನ್ನುವುದು ಅಪ್ಪಟ ಸುಳ್ಳು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ’ ಯೋಜನೆಯಡಿ ದಿನನಿತ್ಯ ಸುಮಾರು 50 ಲಕ್ಷ ಮಹಿಳೆಯರು ಪ್ರಯಾಣ ಮಾಡುತ್ತಿದ್ಧಾರೆ. ಕರ್ನಾಟಕದ ಯಾವುದೇ ಮೂಲೆ ಮೂಲೆಗೂ ಮಹಿಳೆಯರು ಪ್ರಯಾಣಿಸುವ ಅವಕಾಶವನ್ನು ಸರ್ಕಾರ ಕಲ್ಪಿಸಿ ಕೊಟ್ಟಿದೆ, ಇದರಿಂದಾಗಿ ರಾಜ್ಯದಲ್ಲಿ ಎಲ್ಲಾ ಪ್ರವಾಸಿ ತಾಣಗಳು, ದೇವಾಲಯಗಳು ಮಹಿಳಾ ಭಕ್ತರಿಂದ ತುಂಬಿ ತುಳುಕುತ್ತಿದೆ, ಮಹಿಳೆಯರಿಗೆ ದಿನನಿತ್ಯ ಸಂಚರಿಸಿದ್ದಷ್ಟೆ ಮೊತ್ತವನ್ನು ಸರ್ಕಾರಿ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಪಾವತಿ ಮಾಡುತ್ತಿದೆ. ಇದರಿಂದ ದೇವಾಲಯಗಳು ಮತ್ತು ಪ್ರವಾಸಿ ಸ್ಥಳಗಳ ಆದಾಯ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ರಾಜ್ಯದ ಮಹಿಳೆಯರು ಶಕ್ತಿ ಯೋಜನೆಯನ್ನು ಮನ ಪೂರ್ವಕವಾಗಿ ಸ್ವಾಗತಿಸಿದ್ದು, ದಿನ ನಿತ್ಯ ಇದರ ಉಪಯೋಗ ಪಡೆಯುತ್ತಿದ್ದಾರೆ. ಹೀಗಿರುವಾಗ ಉಚಿತ ಬಸ್ ಪ್ರಯಾಣವನ್ನು ಸರ್ಕಾರ ಏಕೆ ರದ್ದು ಮಾಡುತ್ತದೆ ಅಲ್ಲವೇ ? ಇನ್ನು ಮುಂದೆಯೂ ಕೂಡ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಎಂದಿನಂತೆ ಉಚಿತವಾಗಿ ಪ್ರಯಾಣಿಸಬಹುದು.