ಸಂಕಷ್ಟ ಸಂದರ್ಭದಲ್ಲಿಯೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆಂಬ ಕಾವೇರಿ ನಿಯಂತ್ರಣ ಸಮಿತಿಯ ಸೂಚನೆಯನ್ನು ವಿರೋಧಿಸಿ ಶ್ರೀರಂಗಪಟ್ಟಣದಲ್ಲಿ ರೈತರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣದ ಕುವೆಂಪು ವೃತ್ತದಲ್ಲಿ ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ರೈತರು ಕೆಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.
ಇಲ್ಲಿನ ರೈತರಿಗೆ ನೀರಿಲ್ಲದಿರುವಾಗ ತಮಿಳುನಾಡಿಗೆ ನೀರು ಹರಿಸಿ ಎಂದು ಆದೇಶ ನೀಡಿರುವುದು ಸರಿಯಲ್ಲ, ಪ್ರಸ್ತುತ ಜಲಾಶಯದಲ್ಲಿ 101 ಅಡಿ ನೀರು ಮಾತ್ರ ಉಳಿದಿದ್ದು, ಇದೀಗ ಕಾವೇರಿ ನಿಯಂತ್ರಣ ಸಮಿತಿ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಕಿಡಿಕಾರಿದರು.
ರೈತರು ಬೆಳೆದಿರುವ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ, ಹೊಸ ಬೆಳೆ ಹಾಕಲು ಸಾಧ್ಯವಾಗುತ್ತಿಲ್ಲ, ಕಟ್ಟು ಪದ್ಧತಿಯಲ್ಲಿ ನೀರು ಬಿಡುವುದಾಗಿ ಹೇಳಿದ ನೀರಾವರಿ ಇಲಾಖೆ ರೈತರ ಬೆಳೆ ರಕ್ಷಣೆಗೆ ಮುಂದಾಗಿಲ್ಲ.
ಜನ ಜಾನುವಾರುಗಳಿಗೂ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.
ರೈತ ಮುಖಂಡರಾದ ಪಿ.ಆರ್ ರಮೇಶ್, ಶಂಕರ್ ಬಾಬು, ಪಾಂಡು, ಕೆಂಪೇಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.