ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲೆಗೊಂದು ಕ್ರೀಡೆ ಆಯ್ಕೆ ಕುರಿತ ಸಭೆಯಲ್ಲಿ ಒಮ್ಮತದಿಂದ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾಧಿಕಾರಿ ಡಾ.ಕುಮಾರ ಈ ಕುರಿತು ಮಾತನಾಡಿ, ಭಾರತದ ದೇಸೀ ಕ್ರೀಡೆ ಕಬಡ್ಡಿಯು ದೇಶಕ್ಕೆ ಸಾಕಷ್ಟು ಹೆಗ್ಗಳಿಕೆಯ ಜೊತೆಗೆ ಹೆಸರನ್ನೂ ತಂದು ಕೊಟ್ಟಿದೆ. ಗ್ರಾಮೀಣ ಜನರಿಗೆ ಬಹಳ ಇಷ್ಟವಾದ ಕಬ್ಬಡಿ ಕ್ರೀಡೆಯು ಮಂಡ್ಯ ಜಿಲ್ಲೆಯಲ್ಲಿ ಜನಪ್ರಿಯತೆ ಹೊಂದಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಗೆ ಕಬ್ಬಡಿಯನ್ನು ಆಯ್ಕೆ ಮಾಡಲಾಗಿದೆ ಎಂದರು.
ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯ ಕಬ್ಬಡಿ ಕ್ರೀಡಾಪಟುಗಳು ಇದ್ದಾರೆ, ಹಾಗಾಗಿ ಕಬ್ಬಡಿ ಆಯ್ಕೆ ಸೂಕ್ತ ಎಂದಾಗ ಸಭೆಯು ಸಹಮತ ವ್ಯಕ್ತಪಡಿಸಿತು.
ರಾಜ್ಯದಲ್ಲಿ ವಿವಿಧ ಪ್ರದೇಶಗಳಲ್ಲಿ ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಕ್ರೀಡೆಗಳನ್ನು ಗುರುತಿಸಿ ಅವುಗಳಲ್ಲಿ ತೊಡಗಿಸಿಕೊಂಡಿರುವ ಕ್ರೀಡಾಪಟುಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಸಶಕ್ತಗೊಳಿಸುವುದು ಮತ್ತು ಆಯ್ಕೆ ಮಾಡಲಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಸನ್ನದ್ದಗೊಳಿಸುವುದು ಜಿಲ್ಲೆಗೊಂದು ಕ್ರೀಡೆ ಎಂಬುದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕಬ್ಬಡಿ, ಖೋಖೋ, ವಾಲಿಬಾಲ್ ಮತ್ತು ಫುಟ್ಬಾಲ್ ಕ್ರೀಡೆ ಬಗ್ಗೆ ಚರ್ಚೆಯಾಯಿತು. ಅಂತಿಮವಾಗಿ ಕಬ್ಬಡಿಯನ್ನು ಆಯ್ಕೆಮಾಡಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗಾರಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್ ಹಾಗೂ ಜಿಲ್ಲೆಯ ಕ್ರೀಡಾ ಸಂಘ ಸಂಸ್ಥೆಗಳ ಅಧ್ಯಕ್ಷರು ಕಾರ್ಯದರ್ಶಿಗಳು ಹಾಜರಿದ್ದರು.