ಮದ್ದೂರು ತಮಿಳು ಕಾಲೋನಿಯ ಜಾಗದ ವಿಚಾರದಲ್ಲಿ ತಲೆದೂರಿರುವ ಸಮಸ್ಯೆಯನ್ನು ಬಗೆಹರಿಸಿ, ಭೂಮಿಯನ್ನು ಸ್ಲಂ ಬೋರ್ಡ್ ಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿ ಕಳೆದ 24 ದಿನಗಳಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಬಳಿ ಭೂಮಿ ಮತ್ತು ವಸತಿ ಹಕ್ಕುಗಳ ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವದಿ ಧರಣಿ ತಾತ್ಕಾಲಿಕ ಅಂತ್ಯ ಕಂಡಿದೆ.
ಕೃಷಿ ಹಾಗೂ ಜಿಲ್ಲಾ ಉಸ್ತುವಾರ ಮಂತ್ರಿ ಎನ್.ಚಲುವರಾಯಸ್ವಾಮಿ ಅವರು ಶನಿವಾರ ಮಧ್ಯಾಹ್ನ ಶ್ರಮಿಕರು ಹೋರಾಟ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತನಾಡಿ, ಇನ್ನೂ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹೋರಾಟಗಾರರು, ಮದ್ದೂರು ತಮಿಳು ಕಾಲೋನಿ ಜಾಗಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಇವೆಲ್ಲವನ್ನು ಆಲಿಸಿದ ಸಚಿವರು ಈಗ ಹಬ್ಬದ ಸಮಯ ಹೋರಾಟವನ್ನು ಕೈಬಿಡಿ, ಒಂದು ವಾರ ಕಾಲಾವಕಾಶ ನೀಡಿದರೆ ಸಮಸ್ಯೆ ಬಗೆಹರಿಸಿ ಕೊಡುತ್ತೇವೆಂದು ಭರವಸೆ ನೀಡಿದರು.
ಮಂಡ್ಯದ ಲಾಯರ್ ಅಸೋಸಿಯೇಷನ್ ಸನ್ಮಾನ ಸ್ವೀಕರಿಸಲು ಆಗಮಿಸಿದ ಸಚಿವರಿಗೆ, ತಮ್ಮ ಸಮಸ್ಯೆಯನ್ನು ಆಲಿಸದಿದ್ದರೆ ಕಪ್ಪು ಬಾವುಟ ಪ್ರದರ್ಶಿಸಿಲಾಗುವುದು ಎಂದು ಹೋರಾಟಗಾರುರು ಎಚ್ಚರಿಕೆ ನೀಡಲಾಗಿ, ಸ್ಥಳಕ್ಕೆ ಆಗಮಿಸಿ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು, ಹೋರಾಟಗಾರರಿಂದ ಮಾಹಿತಿ ಪಡೆದು, ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಮಧ್ಯೆ ಪ್ರವೇಶಿಸಲು ಕೋಮು ಶಕ್ತಿಗಳ ಯತ್ನ
ಮದ್ದೂರು ತಮಿಳು ಸ್ಲಂ ವಿಚಾರಕ್ಕೆ ಸಂಬಂಧಿಸಿದಂತೆ ಶ್ರಮಿಕ ನಿವಾಸಿಗಳು ಹಾಗೂ ಮುಸ್ಲಿಂ ಸಮುದಾಯದ ವಕ್ಫ್ ಮಂಡಳಿ ನಡುವೆ ಸಮಸ್ಯೆ ತಲೆದೂರಿದ್ದು, ಇದೇ ಸರಿಯಾದ ಸಮಯ ಎಂದು ಪರಿಗಣಿಸಿದ್ದ ಕೋಮುವಾದಿಗಳು, ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸಿ ಹಿಂದೂ- ಮುಸ್ಲಿಂ ಗಲಭೆಯೆಬ್ಬಿಸಲು ಮುಂದಾಗಿದ್ದರು. ಆದರೆ ಈ ಸಮಸ್ಯೆಯನ್ನು ನಾವೇ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇವೆಂದು ಶ್ರಮಿಕ ನಿವಾಸಿಗಳ ಪರ ಹೋರಾಟಗಾರರು ತಿಳಿಸಿದ ನಂತರ, ಕೋಮುಶಕ್ತಿಗಳು ಹಿಮ್ಮೆಟ್ಟಿವೆ ಎಂಬ ಮಾಹಿತಿಯನ್ನು ಹೋರಾಟಗಾರರು ನುಡಿ ಕರ್ನಾಟಕ ಕಾಂ ನೊಂದಿಗೆ ಹಂಚಿಕೊಂಡಿದ್ದಾರೆ.
ಸಮಸ್ಯೆ ಬಗೆಹರಿಯದಿದ್ದರೆ ಮತ್ತೇ ಹೋರಾಟ
ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಚಿವರ ಚಲುವರಾಯಸ್ವಾಮಿ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ, ಒಂದು ವೇಳೆ ಈ ಕಾಲಾವಧಿಯಲ್ಲಿ ಶ್ರಮಿಕ ಜನರ ಸಮಸ್ಯೆ ಬಗೆಹರಿಯದಿದ್ದರೆ, ಮತ್ತೇ ಹೋರಾಟ ಪ್ರಾರಂಭಿಸಬೇಕಾಗುತ್ತದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಕಾರ್ಯದರ್ಶಿ ಎಂ.ಸಿದ್ದರಾಜು ನುಡಿ ಕರ್ನಾಟಕ.ಕಾಂ ಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ರವಿಕುಮಾರ್ ಗಣಿಗ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಉಪಸ್ಥಿತರಿದ್ದರು.