ವರದಿ: ಪ್ರಭು ವಿ ಎಸ್
ಶಾಲೆಯ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಿಡಘಟ್ಟ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವರಾಮ್ ಎಂಬಾತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಶಾಲೆಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕ, ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಶಿಕ್ಷಕನ ದೌರ್ಜನ್ಯದ ಬಗ್ಗೆ ವಿದ್ಯಾರ್ಥಿನಿಯರು ಮನೆಯಲ್ಲಿ ಪೋಷಕರ ಬಳಿ ತಿಳಿಸಿದ್ದರು. ಇದರಿಂದ ಎಚ್ಚೆತ್ತ ಪೋಷಕರು ದಲಿತ ಸಂಘಟನೆಗಳ ಸಹಕಾರದೊಂದಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಮುಖ್ಯ ಶಿಕ್ಷಕ ಶಿವರಾಮ್ ನನ್ನು ಬಂದಿಸಿದ್ದಾರೆ.
ಶಿವರಾಮ್ ಹಿಂದೆ ತೊಪ್ಪನಹಳ್ಳಿ ಹಾಗೂ ಬೋರಪುರ ಗ್ರಾಮದ ಶಾಲೆಗಳಲ್ಲಿ ಸಹ ಕೆಲಸ ನಿರ್ವಹಿಸುವ ವೇಳೆ ಇವರ ಬಗ್ಗೆ ಅಪಾದನೆ ಕೇಳಿ ಬಂದಿದ್ದು, ನಂತರ ಈತನನ್ನು ಶಿಕ್ಷಣ ಇಲಾಖೆ ನಿಡಘಟ್ಟ ಶಾಲೆಗೆ ವರ್ಗಾವಣೆ ಮಾಡಿತ್ತು ಎಂದು ತಿಳಿದು ಬಂದಿದೆ.
ಶಾಸ್ತ್ರ ಹೇಳುವ ನೆಪದಲ್ಲಿ ಈತ ವಿದೇಶಗಳಿಗೂ ಹೋಗಿ ಬರುತ್ತಿದ್ದರು ಎಂಬುದಾಗಿ ಅನೇಕರು ಹೇಳುತ್ತಿದ್ದಾರೆ. ಅಲ್ಲದೇ ಶಾಲೆಗೆ ನಿಯಮಿತವಾಗಿ ಬರುತ್ತಿರಲಿಲ್ಲ ಎಂಬ ದೂರುಗಳು ಈತನ ಮೇಲಿವೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರಿಂದ ಮಾಹಿತಿ ಸಂಗ್ರಹಿಸಿದ್ದು, ಲೈಂಗಿಕ ಕಿರುಕುಳದ ಬಗ್ಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಕರಣ ಕುರಿತು ವರದಿ ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ವಿರೋಧಿ ಆಂದೋಲನ ಸಂಘಟನೆಯು ಇದೇ 20 ರ ಬುಧವಾರದಂದು ಕಾಲೇಜಿಗೆ ಭೇಟಿಯಾಗಲಿದೆ ಎಂದು ಸಂಘಟನೆಯ ಪರವಾಗಿ ಪೂರ್ಣಿಮ ಅವರು ತಿಳಿಸಿದ್ದಾರೆ.