ಪಟೇಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅ.11ರಂದು ಸಂಜೆ 4 ಗಂಟೆಗೆ ಮಂಡ್ಯನಗರದ ಕರ್ನಾಟಕ ಸಂಘದ ಕುವೆಂಪು ರಂಗಮಂದಿರದಲ್ಲಿ ವೀರಯೋಧ ಆರ್.ಲೋಕೇಶ್ ಸ್ಮರಣಾರ್ಥ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ವಿಶ್ವಮಾನವ ಶಾಖಾಮಠದ ಶ್ರೀ ಪುರುಷೋತ್ತಮಾ ನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್. ನಾಗರಾಜು ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಅಧ್ಯಕ್ಷತೆವಹಿಸುವರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತ ಎಲ್.ಹುಲ್ಮನಿ ಸನ್ಮಾನ ಮತ್ತು ವಿದ್ಯಾರ್ಥಿ ಪುರಸ್ಕಾರ ಪ್ರದಾನ ಮಾಡುವರು ಎಂದು ವಿವರಿಸಿದರು.
ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಶಶಿಧರ್ ಬಸವರಾಜು, ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಜಿ.ಎಸ್.ಯೋಗೇಶ್, ನಿವೃತ್ತ ವೀರಯೋಧ ಹೆಚ್.ಡಿ.ಹರೀಶ್ ಕುಮಾರ್ ಹಾಗೂ ಮುಖ್ಯ ಶಿಕ್ಷಕ ಜಿ.ಟಿ.ಶಿವರಾಮು ಅವರನ್ನು ಸನ್ಮಾನಿಸಲಾಗುವುದು ಎಂದರು.
ವೈದ್ಯಕೀಯ ವಿದ್ಯಾರ್ಥಿ ಸ್ವರೂಪ್, ಪಶು ವೈದ್ಯಕೀಯ ವಿದ್ಯಾರ್ಥಿ ಮಹದೇವ, ಕೃಷಿ ವಿಜ್ಞಾನ ವಿದ್ಯಾರ್ಥಿ ರೋಹಿತ್, ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿ ಎನ್.ಡಿ.ರಂಜಿತ, ದಂತ ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿ ರಾಹುಲ್ ಡಿ.ಎಸ್. ಅವರಿಗೆ ತಲಾ 20 ಸಾವಿರ ರೂ.ಗಳ ನಗದು ವಿದ್ಯಾರ್ಥಿ ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು.
ಬಿದರಕಟ್ಟೆ ಪ್ರಗತಿಪರ ರೈತ ರವಿಕುಮಾರ್ ಅವರಿಗೆ 5 ಸಾವಿರ ರೂ.ಗಳ ಕೃಷಿಕ ಪ್ರಶಸ್ತಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಡಿ.ಎಸ್.ಅಶ್ವಥಿ, ಡಿ.ಸಿ.ಸುಮಿತ್ರ, ಡಿ.ಎಸ್.ರಕ್ಷಿತಾ ಹಾಗೂ ಡಿ.ಆರ್.ಅಶ್ವಿನಿ ಅವರಿಗೆ ತಲಾ 5 ಸಾವಿರ ರೂ.ಗಳ ವಿದ್ಯಾರ್ಥಿ ಪುರಸ್ಕಾರ ನೀಡಲಾಗುವುದು, ಅಲ್ಲದೇ ಕುವೆಂಪು ಅವರ ಮಕ್ಕಳಿಗೇಕೆ ವೈಚಾರಿಕತೆ ವಿಷಯದ ಪ್ರಬಂಧ ಸ್ಪರ್ಧೆ ವಿಜೇತರಾದ ಹೆಚ್.ಕೆ.ಪ್ರೀತಿ, ಡಿ.ಮಂಜುನಾಥ್, ಎಂ.ಪೂರ್ವಿಕ ಅವರಿಗೆ ಬಹುಮಾನ ವಿತರಣೆ ಮಾಡಲಾವುದು ಎಂದರು.
ಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜೆ.ರಾಜಶೇಖರಯ್ಯ ಉಪಸ್ಥಿತರಿದ್ದರು.