ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರಿಗೆ ಆನ್ ಲೈನ್ ಹಾಜರಾತಿಗಾಗಿ ಒತ್ತಾಯಿಸುತ್ತಿರುವುದನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಪುಟ್ಟಮಾಧು ಖಂಡಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರದ ಕೃಷಿ ಕೂಲಿಕಾರರ ಸಂಘದ ಕಚೇರಿಯಲ್ಲಿ ನಡೆದ 4ನೇ ವರ್ಷದ ರಾಜ್ಯಮಟ್ಟದ ಮಹಿಳಾ ಕೃಷಿ ಕೂಲಿಕಾರರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆನ್ ಲೈನ್ ಹಾಜರಾತಿ ಮಾಡುವ ಮೂಲಕ ಕೂಲಿಕಾರರನ್ನು ನರೇಗಾ ಯೋಜನೆಯಿಂದ ವಂಚಿಸುವ ಕೆಲಸ ನಡೆಯುತ್ತಿದೆ.ಇದಕ್ಕೆ ನಮ್ಮ ಸಂಘ ತೀವ್ರವಾಗಿ ವಿರೋಧಿಸುತ್ತದೆ ಎಂದರು.
ಎಸ್ಸಿ,ಎಸ್ಟಿ ಕುಟುಂಬದವರಿಗೆ 70 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಸರ್ಕಾರ ಘೋಷಿಸಿದೆ. 70 ಯೂನಿಟ್ ವಿದ್ಯುತ್ ಪಡೆಯಲು ಹಳೆಯ ಬಾಕಿಯನ್ನು ಪಾವತಿಸಬೇಕು. ವಿದ್ಯುತ್ ಶುಲ್ಕ ನೀಡಿದ ನಂತರ ಸಬ್ಸಿಡಿ ಮುಖಾಂತರ ಹಣ ಹಾಕುತ್ತೇವೆ ಎಂದು ಹೇಳುವುದು ಅವೈಜ್ಞಾನಿಕ .ಅಡಿಗೆ ಅನಿಲ ಸಬ್ಸಿಡಿ ಮಾಡಿದ ರೀತಿಯೇ ಇದನ್ನು ಮಾಡುತ್ತಾರೆ.
10ನೇ ತರಗತಿ ಪಠ್ಯ ಪುಸ್ತಕದಲ್ಲಿ ಭಗತ್ ಸಿಂಗ್ ಅವರ ವಿಚಾರವನ್ನು ತೆಗೆದು ಹಾಕಿ ಆರ್ ಎಸ್ ಎಸ್ ಸಂಸ್ಥಾಪಕರ ಭಾಷಣವನ್ನು ಪಠ್ಯದಲ್ಲಿ ಅಳವಡಿಸಿರುವುದು ಖಂಡನಾರ್ಹ ಎಂದರು.
ಈ ಸಂದರ್ಭದಲ್ಲಿ ಬಿ.ಹನುಮೇಶ್,ಬಿ.ಎಂ.ಶಿವಮಾದಯ್ಯ,ರಾಮಚಂದ್ರ, ಚಿಕ್ಕತಮ್ಮೇಗೌಡ,ವಸಂತ,ಗೌರಮ್ಮ, ತಾಯಮ್ಮ ಮತ್ತಿತರರು ಇದ್ದರು.