ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ವೈಚಾರಿಕ ಮನೋಭಾವಕ್ಕೆ ಹೆಚ್ಚು ಒತ್ತು ನೀಡಬೇಕು ಹಾಗೂ ವೈಜ್ಞಾನಿಕ ತಳಹದಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಇಸ್ರೋದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರಾದ ಶ್ರೀನಾಥ್ ರತ್ನಕುಮಾರ್ ತಿಳಿಸಿದರು.
ಮಂಡ್ಯ ವಿಶ್ವವಿದ್ಯಾಲಯದಲ್ಲಿ ನಡೆದ ”ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಇತ್ತೀಚಿನ ಪ್ರಗತಿಗಳು” ಎಂಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ ಎಂ ವಿಶ್ವೇಶ್ವರಯ್ಯ, ಹೆಚ್ ನರಸಿಂಹಯ್ಯ, ಪ್ರೊ. ಸಿ.ಎನ್ ರಾವ್, ಡಾ. ವಿಕ್ರಂ, ಎ.ಪಿ.ಜೆ ಅಬ್ದುಲ್ ಕಲಾಂ ಹಾಗೂ ಸತೀಶ್ ಈ ಆರು ಪ್ರಮುಖ ವ್ಯಕ್ತಿಗಳು ಇಸ್ರೋ ಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ, ಹಾಗೇ ಅವರು ಹಾಕಿರುವ ಬುನಾದಿಯನ್ನು ನಾವು ಮುಂದಿನ ದಿನಗಳಲ್ಲಿ ಅತ್ಯುತ್ತಮ ಸ್ಥಾನಕ್ಕೆ ಕರೆದೊಯ್ಯಬೇಕು ಎಂದರು.
ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪುಟ್ಟರಾಜು ಮಾತನಾಡಿ, ಲೆನ್ಸ್ ಟೆಕ್ನಾಲಜಿಯಲ್ಲಿ ಭಾರತ ದೇಶವು ಪ್ರಪಂಚದ 5ನೇ ದೇಶವಾಗಿ ಹೊರಹೊಮ್ಮಿದೆ, ಹಾಗೇ ಯಶಸ್ವಿಯಾದ ಚಂದ್ರಯಾನ-3ರಿಂದ ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ರಿಜಿಸ್ಟರ್ (ಆಡಳಿತ) ಆರ್ ಚಂದ್ರಯ್ಯ, ಮಂಡ್ಯ ವಿಶ್ವವಿದ್ಯಾಲಯದ ರಿಜಿಸ್ಟರ್ (ಮೌಲ್ಯಮಾಪನ) ಡಾ.ರಂಗರಾಜು ಎಚ್. ಜೆ, ಎಎಸ್ಇಇ ನ ಗೌರವಾಧ್ಯಕ್ಷ ಡಾ. ಬಿ.ಕೆ ಸುರೇಶ, ಬೆಂಗಳೂರಿನ ಮಾಜಿ ಇಸ್ರೋ ವಿಜ್ಞಾನಿ ಸಿ.ಡಿ ಪ್ರಸಾದ್ ಹಾಗೂ ಎಸ್ ಹಿರಿಯಣ್ಣ ಸೇರಿದಂತೆ ಇನ್ನಿತರ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.