ನೂರು ವರ್ಷಗಳ ಹಿಂದೆ ಮಹಾರಾಜರಿಂದ ದಾನವಾಗಿ ಬಂದಿದ್ದ ಜಮೀನನ್ನು ಖಾಸಗಿ ವ್ಯಕ್ತಿಯಿಂದ ಹಣ ಕೊಟ್ಟು ಖರೀದಿ ಮಾಡಿದ್ದೇನೆ, ಈಗ ಅದನ್ನು 100 ಕೋಟಿ ಬೆಲೆ ಬಾಳುವ ಆಸ್ತಿ ಎಂದು ವಿಪಕ್ಷ ನಾಯಕರು ಕಥೆ ಕಟ್ಟುತ್ತಿದ್ದಾರೆ, ಅವರು ನನಗೆ ಕೇವಲ 20 ಕೋಟಿ ಕೊಡಲಿ, ಅವರಿಗೆ ಆಸ್ತಿಯನ್ನು ಬರೆದು ಕೊಡುತ್ತೇನೆ ಎಂದು ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇವಾಲಯ ಆವರಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳಿಗೆ ನಾನು ಸೇರಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡಲಿಲ್ಲ ಎಂದರೆ ಊಟ ಸೇರಲ್ಲ, ನಿದ್ದೆ ಬರಲ್ಲ, ನಾನು ಕೆರೆ ಜಾಗವನ್ನು ಕಬಳಿಸಿದ್ದೇನೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಸ್ಪಷ್ಟನೆ ನೀಡಿದರು
6,663 ಕೋಟಿ ಪರಿಹಾರಕ್ಕೆ ಮನವಿ
ರಾಜ್ಯದ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ 6,663 ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ, ದೆಹಲಿಗೆ ಹೋಗಿ ಕೇಂದ್ರ ಅರ್ಥ ಸಚಿವರಾಗ ನಿರ್ಮಲಾ ಸೀತಾರಾಮ್ ಅವರ ಬಳಿಯೂ ಚರ್ಚೆ ನಡೆಸಿದ್ದೇವೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಇಡೀ ದೇಶದಲ್ಲಿ ಬರ ಪರಿಹಾರಕ್ಕಾಗಿ ಅಧ್ಯಯನ ವರದಿ ಸಲ್ಲಿಸಿರುವುದು ಕರ್ನಾಟಕ ಸರ್ಕಾರ ಮಾತ್ರ, ಬೇರ್ಯಾವುದೆ ರಾಜ್ಯ ಅಂಕಿ, ಅಂಶಗಳ ಸಹಿತ ಅಧ್ಯಯನದ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ, ರಾಜ್ಯದ ರೈತರಿಗೆ ನ್ಯಾಯ ಒದಗಿಸಲು ನಾವು ಬದ್ದರಾಗಿದ್ಧೇವೆ ಎಂದರು.
ಜೆಡಿಎಸ್-ಬಿಜೆಪಿ ನಾಯಕರಿಗೆ ನಿಜವಾಗಿಯೂ ಕಾಳಜಿ ಇದ್ದರೆ, ಅವರು ಬರ ಅಧ್ಯಯನ ಮಾಡುವ ಪ್ರಯೋಜನವಿಲ್ಲದ ಕೆಲಸವನ್ನು ಬಿಟ್ಟು, ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ಒಂದು ವರ್ಷದ ನಂತರ ಅಭಿವೃದ್ದಿಗೆ ವೇಗ ಬರಲಿದೆ, ಆದ್ದರಿಂದ ರಾಜ್ಯದ ಜನತೆ ಜನಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.