ಮಂಡ್ಯ ನಗರದ ಕುಡಿಯುವ ನೀರಿನ ದರವನ್ನು ಮಾಸಿಕ ₹225 ನಿಗಧಿ ಪಡಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಮಂಡ್ಯ ನಗರದ ಕುಡಿಯುವ ನೀರಿನ ಗ್ರಾಹಕರ ಜಾಗೃತ ವೇದಿಕೆ ಸ್ವಾಗತಿಸಿದೆ.
ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮುಖಂಡ ಮಹದೇವ ಭಗವಾನ್ ಅವರು, ಮಂಡ್ಯ ನಗರದ 35 ವಾರ್ಡಿನ ನಾಗರೀಕರ ಬಹು ವರ್ಷಗಳ ಹೋರಾಟದ ಫಲಶೃತಿಯಾಗಿ ಕುಡಿಯವ ನೀರಿನ ದರ ಪರಿಷ್ಕರಣೆ ಮಾಡಿ ಮಾಸಿಕ ₹282 ಗಳಿಂದ ₹ 225 ಗಳಿಗೆ ಕಡಿತ ಮಾಡಿರುವ ಆದೇಶಕ್ಕೆ ಶ್ರಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಶಾಸಕರಾದ ಗಣಿಗ ರವಿಕುಮಾರ್ ಅವರಿಗೆ ಮಂಡ್ಯ ನಗರ ಕುಡಿಯುವ ನೀರಿನ ಗ್ರಾಹಕರ ಜಾಗೃತ ವೇದಿಕೆಯು ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸುತ್ತದೆ ಎಂದರು.
ಹಿಂದಿನ ಬಾಕಿ, ಬಡ್ಡಿ ವಸೂಲಾತಿ ಮತ್ತಿತರ ವಿಷಯಗಳ ಬಗ್ಗೆ ತುರ್ತು ಗಮನಹರಿಸಿ, ಗ್ರಾಹಕರ ಹಿತ ಕಾಪಾಡಲು ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ. ಮಂಡ್ಯ ನಗರಸಭಾ ವ್ಯಾಪ್ತಿಯ 35 ವಾರ್ಡ್ ಗಳಿಗೆ 24×7 ನೀರು ಪೂರೈಕೆಯ ಯೋಜನೆ ವಿಳಂಬವಾಗಿರುವ ಬಗ್ಗೆ ಆಸಕ್ತಿ ತಾಳಬೇಕೆಂದು ಮನವಿ ಮಾಡಿದ್ದಾರೆ.
2019 ರಿಂದ ನಡೆಸಿದ ಹೋರಾಟಕ್ಕೆ ತಾರ್ಕಿಕ ರೂಪ ಕೊಟ್ಟಿರುವ ಜನಪ್ರತಿನಿಧಿಗಳು ಹಾಗೂ ತಮ್ಮೊಂದಿಗೆ ಹೋರಾಟಕ್ಕೆ ಶ್ರಮಿಸಿದ ನಾಗರೀಕರು ಹಾಗೂ ಮಾಧ್ಯಮದವರ ಸಹಕಾರಕ್ಕೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಧಾಮಸ್ ಬೆಂಜಮಿನ್, ರಾಮಣ್ಣ ಜೋಸೆಫ್, ಎಂ.ಡಿ.ಸುಂದರ್, ಹನುಮಂತಣ್ಣ ಹಾಗೂ ಸತ್ಯ ಸಾವಿತ್ರಿ ಉಪಸ್ಥಿತರಿದ್ದರು.