ಬೆಳಗಾವಿಯ ಅಧಿವೇಶನದಲ್ಲಿ ಪೌರಾಡಳಿತ ಸಚಿವರೊಡಗೂಡಿ ಮಂಡ್ಯ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುರಾಯಸ್ವಾಮಿ, ಮಂಡ್ಯ ಶಾಸಕ ರವಿಕುಮಾರ್ ಹಾಗೀ ಇತರ ನಾಯಕರು ಚರ್ಚಿಸಿ ನೀರಿನ ಕಂದಾಯ ದರವನ್ನು ₹225 ಕ್ಕೆ ಅಂತಿಮಗೊಳಿಸಿದ್ದು, ಈ ದರವು ಇದೇ ಡಿ.1ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ ಎಂದು ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಯ ಕೆಡಿಪಿ ಸಭೆ ಭಾಗವಹಿಸಿದ್ದ ಸಂದರ್ಭ ನೀರಿನ ದರ ಕಡಿಮೆ ಮಾಡುವಂತೆ ಗಮನ ಸೆಳೆಯಾಗಿದ್ದು, ಇದಕ್ಕೆ ಸ್ಪಂದಿಸಿದ ಅವರು ನೀರಿನ ದರ ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಮಂಡ್ಯ ನಗರದ ಕುಡಿಯುವ ನೀರಿನ ದರವನ್ನು ₹ 282 ರಿಂದ 225 ಕ್ಕೆ ಇಳಿಸಿ ಸಚಿವ ಚಲುವರಾಯಸ್ವಾಮಿ ಅವರ ನೇತೃತ್ವದ ಸಭೆ ನಿರ್ಧರಿಸಿರುವುದು ಮಂಡ್ಯನಗರದ ಜನತಗೆ ಸಂತೋಷದ ವಿಚಾರವಾಗಿದೆ, ಇದಕ್ಕಾಗಿ ನಮ್ಮ ನಾಯಕನ್ನು ಜನತೆ ಪರವಾಗಿ ಅಭಿನಂದಿಸುತ್ತೇವೆ ಎಂದರು.
ಕಳೆದ 18 ವರ್ಷಗಳ ಹಿಂದೆ ಚಲುವರಾಯಸ್ವಾಮಿಸಚಿವರಾಗಿದ್ದ ಸಂದರ್ಭದಲ್ಲಿ ಗಣನೀಯವಾದ ನೀರಿನ ಬಿಲ್ಲನ್ನು ಮನ್ನಾ ಮಾಡಲಾಗಿತ್ತು, ಈಗಲೂ ಕೂಡ ನೀರಿನ ಬಿಲ್ಲಿನ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ, ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮಂಡ್ಯ ನಗರ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ, ನಗರಸಭಾ ಸದಸ್ಯರಾದ ರಾಮಲಿಂಗಯ್ಯ, ಶ್ರೀಧರ್ ಹಾಗೂ ನಹೀಂ, ಉಪಸ್ಥಿತರಿದ್ದರು.