ಮಂಡ್ಯ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್ಡಿ)
ಇದರ ಆಡಳಿತ ಮಂಡಳಿಗೆ ನಿರ್ದೇಶಕರನ್ನಾಗಿ ಮಂಡ್ಯ ತಾಲೂಕಿನ ದುದ್ಧ ಹೋಬಳಿ ಮಾರನಹಳ್ಳಿ ಗ್ರಾಮದ ಎಂ.ಸಿ.ಕೃಷ್ಣೇಗೌಡ ಅವರನ್ನು ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸಹಕಾರ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ವಿ.ರಾಘವನ್ ಆದೇಶಿಸಿದ್ದಾರೆ.
ನೂತನ ನಿರ್ದೇಶಕರನ್ನು ಮಂಡ್ಯ ತಾಲ್ಲೂಕು ಪಿಎಲ್ ಡಿ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ ಬೇಲೂರು ಸೋಮಶೇಖರ್ ಅಭಿನಂದಿಸಿ ಮಾತನಾಡಿ, ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಪಿಎಲ್ಡಿ ಬ್ಯಾಂಕಿಗೆ ಸರ್ಕಾರ ಎಂ.ಸಿ.ಕೃಷ್ಣೇಗೌಡರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ದುದ್ಧ ಹೋಬಳಿಗೆ ಆದ್ಯತೆ ನೀಡಿದೆ, ಅವರು ಪಿಎಲ್ಡಿ ಬ್ಯಾಂಕ್ ಆಡಳಿತ ಮಂಡಳಿಗೆ ಸಹಕಾರ ಕೊಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಹೆಚ್.ಸಿ. ಶಿವಲಿಂಗೇಗೌಡ, ಬಿ.ಎಲ್. ಬೋರೇಗೌಡ, ಸುನಂದಾ ಸಿದ್ದರಾಮು, ಸರಸ್ವತಿ ಶಂಕರ್, ಚಿಕ್ಕಬೆಟ್ಟಯ್ಯ, ಮಾಜಿ ಉಪಾಧ್ಯಕ್ಷ ಗಾಣದಾಳು ವಿಜಯ್ ಕುಮಾರ್, ಲೋಕೇಶ್, ಹರ್ಷ, ಶಿವಣ್ಣ, ನಿಂಗೇಗೌಡ ಸೇರಿದಂತೆ ಮತ್ತಿತರರಿದ್ದರು.