ಹನುಮ ಮಾಲೆ ಕಾರ್ಯಕ್ರಮದಲ್ಲಿ ಕೋಮು ಪ್ರಚೋಧನೆಯ ಮಾತುಗಳನ್ನಾಡಿರುವ ಸಂಘ ಪರಿವಾರದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದ ಸೂಮೋಟೋ ಪ್ರಕರಣ ದಾಖಲಿಸಿ, ಕೂಡಲೆ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಹಾಗೂ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಅವರಿಗೆ ಮನವಿ ಸಲ್ಲಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ನಲ್ಲಿರುವ ನಿಮಿಷಾಂಭ ದೇವಸ್ಥಾನದಲ್ಲಿ ಕಳೆದ ಡಿ.24ರಂದು ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ಟ, ಮುಸ್ಲಿಂ ಮಹಿಳೆಯರ ಬಗ್ಗೆ ಅಗೌರವದ ಮಾತನಾಡಿದ್ದಲ್ಲದೆ, “ಅಲ್ಲಾಹು ಆಕ್ಟರ್” ಎಂದೇಳಲು ಮುಸ್ಲಿಮರು ಅವರವರ ಮನೆ ಮತ್ತು ಮಸೀದಿಯಲ್ಲಿ ಮಾತ್ರ ಹೇಳಬೇಕು. ಇನ್ನೆಲ್ಲಾ ರಾಮನಾಮ ಹೇಳಬೇಕು ಎಂದು ಕಟ್ಟಪ್ಪಣೆ ನೀಡಿದ್ದಾರೆ. ಜ್ಯಾತ್ಯಾತೀತ ಭಾರತದಲ್ಲಿ ಉಪಾಸನೆಯ ಸ್ವಾತಂತ್ರ್ಯವನ್ನು ಭಾರತ ಸಂವಿಧಾನ ಪ್ರತಿಯೊಬ್ಬರಿಗೂ ಕಲ್ಪಿಸಿದ್ದರೂ ಈ ಕೋಮುವಾದಿ ಕಲ್ಲಡ್ಕ ಪ್ರಭಾಕರ್ ಭಟ್ಟರು ಸಂವಿಧಾನ ವಿರೋಧಿಯಾಗಿ ಮಾತನಾಡಿರುವುದರಿಂದ ಕೂಡಲೇ ಪ್ರಕರಣ ದಾಖಲಿಸಬೇಕೆಂದು ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.
ಕಲ್ಲಡ್ಕ ಪ್ರಭಾಕರ ಭಟ್ ಕೋಮು ಪ್ರಚೋಧನೆ ಜೊತೆಗ ಮುಸ್ಲಿಂ ಮಹಿಳೆಯರಿಗೆ ಪರ್ಮೆನೆಂಟ್ ಗಂಡನನ್ನು ಕೊಟ್ಟವರು ಬಿಜೆಪಿಯವರೆಂದು ಅಸಹ್ಯವಾಗಿ ಮಾತನಾಡಿದ್ದಾರೆ, ಜಾತಿ, ಮತಗಳನ್ನು ಮೀರಿ ಅಂತರ ಜಾತಿ – ವಿವಾಹವನ್ನು ಧಿಕ್ಕರಿಸಿ ಮಾತನಾಡಿರುವುದು ಸಮಾಜ ವಿರೋಧಿ ನಡವಳಿಕೆಯಾಗಿದೆ. ಮಂಗಳೂರಿನಲ್ಲಿ ಬೆಂಕಿ ಹಚ್ಚಿರುವ ಈ ಕಲ್ಲಡ್ಕ ಪ್ರಭಾಕರ್ ಭಟ್ ಮಂಡ್ಯದಲ್ಲೂ ಕೋಮುಗಳ ನಡುವೆ ಬೆಂಕಿಹಚ್ಚುವ ಹುನ್ನಾರದಿಂದಲೇ ಇಂತಹ ಭಾಷಣ ಮಾಡಿದ್ದು, ಆತನನನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಅನಿಲ್ ಕುಮಾರ್ ಹಾಗೂ ಸೋಮಶೇಖರ್ ಉಪಸ್ಥಿತರಿದ್ದರು.