‘ಯುವಜನರು ಕುವೆಂಪು ವೈಚಾರಿಕತೆ ಹಾಗೂ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದಿ ಅರ್ಥೈಸಿಕೊಳ್ಳುವುದರ ಜೊತೆಗೆ ವೈಚಾರಿಕತೆ ರೂಢಿಸಿಕೊಳ್ಳಬೇಕು’, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಕರೆ ನೀಡಿದರು.
ಮೈಸೂರಿನ ತಮ್ಮ ನಿವಾಸದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟ ಮಂಡ್ಯ ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ”ವರ್ತಮಾನದ ವೈಚಾರಿಕ ಭೀಷ್ಮ ಪ್ರಶಸ್ತಿ” ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಯುವಜನರು ವಿಚಾರವಂತರಾಗುತ್ತಿಲ್ಲ’ ಪ್ರಸ್ತುತ ದಿನಗಳಲ್ಲಿ ಸತ್ಯ ಹೇಳುವವರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ, ಯಾರಿಗೂ ಇಂದು ಸತ್ಯ ಬೇಕಾಗಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.
ಸದ್ಯದಲ್ಲೇ ‘ರಾಮಮಂದಿರ ಯಾಕೆ ಬೇಡ’ ಕೃತಿ
ಶೀಘ್ರದಲ್ಲೇ ‘ರಾಮಮಂದಿರ ಯಾಕೆ ಬೇಡ’ ಕೃತಿ ಬಿಡುಗಡೆ ಮಾಡಲಾಗುವುದು’ ಎಂದು ಭಗವಾನ್ ತಿಳಿಸಿದರು. ‘ರಾಮ ಎಂದಿಗೂ ಆದರ್ಶ ವ್ಯಕ್ತಿ ಅಗಿರಲಿಲ್ಲ. ಸದಾ ಮದ್ಯ ವ್ಯಸನಿಯಾಗಿರುತ್ತಿದ್ದ ಹೆಣ್ಣು ಮಕ್ಕಳ ಜೊತೆ ಸುಖಲೋಲುಪತೆಯಲ್ಲಿ ತೇಲುತ್ತಿದ್ದ, ರಾಜ್ಯದ ಆಡಳಿತವನ್ನು ಸಂಪೂರ್ಣ ನಿರ್ಲಕ್ಷಿಸಿದ್ದ ಭರತ ಮಾತ್ರ ಆಡಳಿತವನ್ನು ನೋಡಿಕೊಂಡಿದ್ದ, ಯಾವ ರೀತಿಯಲ್ಲೂ ರಾಮ ಆದರ್ಶ ವ್ಯಕ್ತಿಯೂ ಅಲ್ಲ. ರಾಜನೂ ಅಲ್ಲ’ ಎಂದು ಪ್ರತಿಪಾದಿಸಿದರು.
‘ರಾಮ ರಾಜ್ಯ ಎಂಬುದು ಬರೀ ಸುಳ್ಳಿನ ಕಂತೆ. ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ, ಉದ್ಘಾಟಿಸಲು ಹೊರಟಿದ್ದಾರೆ’ ಎಂದು ಟೀಕಿಸಿದರು.
ನನ್ನನ್ನು ಬ್ರಾಹ್ಮಣ ವಿರೋಧಿ, ಒಕ್ಕಲಿಗ ವಿರೋಧಿ ಎಂದು ಬಿಂಬಿಸಲಾಯಿತು’ ಎಂದು ಬೇಸರದಿಂದ ನುಡಿದ ಅವರು, ವಿಶ್ವದಲ್ಲಿ ಅಂಬೇಡ್ಕರ್ ಅವರಂತಹ ಮತ್ತೊಬ್ಬ ವಿದ್ವಾಂಸ ಇಲ್ಲ, ಎಲ್ಲರೂ ಅವರ ಬದುಕು, ಬರಹ ಹಾಗೂ ವಿಚಾರಗಳನ್ನು ತಪ್ಪದೇ ಓದಬೇಕು’ ಎಂದರು.
ಅಖಿಲ ಭಾರತ ವಕೀಲರ ಒಕ್ಕೂಟದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ವಿಶ್ವನಾಥ್, ರಾಜ್ಯ ಸಮಿತಿ ಸದಸ್ಯ ಪಿ.ಪಿ. ಬಾಬುರಾಜ್, ಚೇತನ್, ವಕೀಲರಾದ ಸೌಮ್ಯ, ಪಲ್ಲವಿ, ಯತೀಶ್, ಕಿಶೋರ್, ಎಸ್.ವಿ.ಪ್ರಕಾಶ್, ಸಚಿನ್, ಎಚ್. ಕಮಲೇಶ್, ಚೇತನ್ ಕುಮಾರ್ ಹಾಗೂ ಮಂಡ್ಯ ಪ್ರಗತಿಪರ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಚಲನಚಿತ್ರ ನಿರ್ದೇಶಕ ಸಾಗರ್ ಹೊನಗಾನಹಳ್ಳಿ ಹಾಜರಿದ್ದರು.