ಕಳೆದ ಎರಡು ತಿಂಗಳ ಹಿಂದೆ ನಡೆದಿದ್ದ ಮಂಡ್ಯದ ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘ (ಆರ್ ಎಪಿಸಿಎಂಎಸ್) ದ ಆಡಳಿತ ಮಂಡಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಜೂನ್ 24 ರಂದು ನಡೆಯಲಿದೆ.
ಕಳೆದ ಏಪ್ರಿಲ್ 23ರಂದು 11ನಿರ್ದೇಶಕ ಮಂಡಳಿಗೆ ಚುನಾವಣೆ ನಡೆದಿತ್ತು. ಆದರೆ ಫಲಿತಾಂಶ ಘೋಷಿಸಲು ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಮತಪಟ್ಟಿಯಲ್ಲಿದ್ದ 350 ಕ್ಕೂ ಹೆಚ್ಚು ಬಿಡಿ ಸದಸ್ಯರನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಅವರಿಗೆ ಮತದಾನದ ಹಕ್ಕು ನೀಡಿ ಆದೇಶ ಹೊರಡಿಸಿತ್ತು. ಅದರಂತೆ ಮತದಾರರು ಮತ ಹಾಕಿದ್ದರು. ನಂತರ ಕಾಂಗ್ರೆಸ್ ಅಭ್ಯರ್ಥಿಗಳು ಬಿಡಿ ಸದಸ್ಯರ ಮತವನ್ನು ಪರಿಗಣಿಸಬಾರದೆಂದು
ಹೈಕೋರ್ಟ್ ನಲ್ಲಿ ಕೇಸು ದಾಖಲಿಸಿದ್ದರು.
ಆದರೆ ಹೈಕೋರ್ಟ್ ಮತದಾನ ಮಾಡಿರುವ ಎಲ್ಲಾ ಮತದಾರರ ಮತವನ್ನು ಪರಿಗಣಿಸಿ ಮತ ಎಣಿಕೆ ಮಾಡುವಂತೆ ಆದೇಶ ನೀಡಿ,ನಾಲ್ಕು ವಾರಗಳಲ್ಲಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು.
ಅದರಂತೆ ಹೈಕೋರ್ಟ್ ಆದೇಶ ಪಡೆದು ಎ ಆರ್ ಅಧಿಕಾರಿಗಳು ಜೂನ್ 24 ರಂದು ಮತ ಎಣಿಕೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ಫಲಿತಾಂಶಕ್ಕಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಅಭ್ಯರ್ಥಿಗಳು ನಿಟ್ಟುಸಿರು ಬಿಡುವಂತಾಗಿದ್ದು, ಫಲಿತಾಂಶ ಯಾರ ಕೊರಳಿಗೆ ವಿಜಯಮಾಲೆ ಹಾಕುವುದೋ ಎಂಬುದು 24ರಂದು ತಿಳಿಯಲಿದೆ.