ಕಬ್ಬಿಗೆ ಬೆಲೆ ನಿಗದಿ, ಹಳೆ ಬಾಕಿ ಪಾವತಿಗಾಗಿ ಒತ್ತಾಯಿಸಿ ಹಾಗೂ ಗೃಹ ವಿದ್ಯುತ್ ಬಿಲ್ ಬಲತ್ಕಾರ ವಸೂಲಿ ಕ್ರಮವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮದ್ದೂರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಜಮಾಯಿಸಿ,ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜಿಲ್ಲಾಧ್ಯಕ್ಷ ಕೆಂಪುಗೌಡ ಮಾತನಾಡಿ, ಪ್ರತಿ ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡಬೇಕು. ಕಾರ್ಖಾನೆಗಳು ಹಳೆ ಬಾಕಿ ಪಾವತಿ ಮಾಡಬೇಕು.
ತೂಕದಲ್ಲಿ ವಂಚನೆ, ಬಾಕಿ ಪಾವತಿಯಲ್ಲಿ ವಿಳಂಬ ಸೇರಿದಂತೆ ಇನ್ನು ಹತ್ತಾರು ಸಂಕಷ್ಟಗಳನ್ನು ನಿವಾರಿಸಬೇಕು. ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡಲು ಶೇ.10 ಇಳುವರಿಯ ಮಾನದಂಡ ಮಾಡಿಕೊಂಡು ಕಾರ್ಖಾನೆಗೆ ಅನುಕೂಲವಾಗುವ ನೀತಿಯನ್ನು ಅನುಸರಿಸಿ ರೈತರಿಗೆ ಅನ್ಯಾಯವೆಸಗಿದೆ.
ಇಂದಿನ ಸರ್ಕಾರ ಮಾತಿನಂತೆ ನಡೆದುಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದರು. ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 11ರ ಸೋಮವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುತ್ತಿದ್ದೇವೆ. ಪಕ್ಷಾತೀತವಾಗಿ ಎಲ್ಲಾ ರೈತ ಬಾಂಧವರು ಈ ಒಂದು ಮುತ್ತಿಗೆ ಕಾರ್ಯಕ್ಕೆ ಬೆಂಬಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆಕೊಟ್ಟರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ರಾಮಕೃಷ್ಣ ಜಿ.ಎ, ಶಂಕರ್, ವರದರಾಜು, ಲಿಂಗಪ್ಪಾಜಿ, ಅಶೋಕ್, ವೆಂಕಟೇಗೌಡ, ರಾಮಣ್ಣ, ಸಿದ್ದೇಗೌಡ,ಪುಟ್ಟಸ್ವಾಮಿ, ವಿನೋದ್ ಬಾಬು ಮತ್ತಿತರರಿದ್ದರು.