ನಾಗಮಂಗಲ ತಾಲೂಕಿನ ಎಲ್ಲಾ ಸರ್ಕಾರಿ ನೌಕರರು ನನ್ನ ರಾಜಕಾರಣವನ್ನು ಗಮನಿಸಿದ್ದು ಅವರ ಪ್ರೀತಿ ಅಭಿಮಾನದ ಸಂಕೇತವೇ ಈ ಗೌರವವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವಾಯ ಸ್ವಾಮಿ ಅವರು ಮಾತನಾಡಿದರು.
ನಾಗಮಂಗಲದಲ್ಲಿ ಶನಿವಾರ ತಾಲೂಕಿನ ಎಲ್ಲ ಸರ್ಕಾರಿ ನೌಕರರ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನನ್ನ ರಾಜಕಾರಣದ ಜೀವನದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಆಗಿನಿಂದಲೂ ಎಲ್ಲಾ ಅಧಿಕಾರಿ ವರ್ಗದವರು ಇದೇ ಪ್ರೀತಿ ವಿಶ್ವಾಸ ನೀಡಿದ್ದಾರೆ. ಎಲ್ಲಾ ನೌಕರ ವರ್ಗದವರು ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬಂದಾಗ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರರು ತಮ್ಮ ಬೇಡಿಕೆಗಳ ಬಗ್ಗೆ ಹಾಗೂ 7ನೇ ವೇತನ ಆಯೋಗದ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿ ಪ್ರಾಮಾಣಿಕವಾಗಿ ಜಾರಿಗೆ ತರುವ ಪ್ರಯತ್ನ ಮಾಡಲಾಗುವುದು. ತಾಲೂಕಿನ ಪ್ರತಿ ಇಲಾಖೆಯೂ ಹಾಗೂ ತೋಟಗಾರಿಕೆ ಕೃಷಿ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರಿಗೆ, ಸಾರ್ವಜನಿಕರಿಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮುಖಾಂತರ ಸಹಕರಿಸಬೇಕೆಂದು ಹೇಳಿದರು.
ಸಮಾರಂಭದಲ್ಲಿ ಡಿವೈಎಸ್ಪಿ ಲಕ್ಷ್ಮಿ ನಾರಾಯಣ್, ತಾಲೂಕು ದಂಡಾಧಿಕಾರಿ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.