Thursday, September 19, 2024

ಪ್ರಾಯೋಗಿಕ ಆವೃತ್ತಿ

ಹೇಮಾವತಿ ನದಿಯಲ್ಲಿ ಪ್ರವಾಹ: ಮುನ್ನೆಚ್ಚರಿಕೆ ನೀಡಿದ ತಹಶೀಲ್ದಾರ್

ಕೆ.ಆರ್.ಪೇಟೆ ತಾಲ್ಲೂಕಿನ ಹೇಮಾವತಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಇರುವುದರಿಂದ ನದಿ ಪಾತ್ರದಲ್ಲಿರುವ ಜನರು ಬಟ್ಟೆಬರೆ ತೊಳೆಯಲು, ದನ-ಕರುಗಳನ್ನು ತೊಳೆಯಲು ಇಳಿಯವಾರದು.ತಗ್ಗು ಪ್ರದೇಶಗಳ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಹಶೀಲ್ದಾರ್ ಎಂ.ವಿ.ರೂಪ ಮನವಿ ಮಾಡಿದ್ದಾರೆ.

ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯದಿಂದ 18 ಸಾವಿರ ಕ್ಯೂಸೆಕ್ಸ್ ನೀರನ್ನು ಹೇಮಾವತಿ ನದಿಗೆ ಹರಿಯ ಬಿಟ್ಟಿರುವುದರಿಂದ ಹೇಮಾವತಿ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹೇಮಾವತಿ ನದಿಯು ಉಕ್ಕಿ ಹರಿಯುತ್ತಿದೆ. ಈ ಹಿನ್ನಲೆಯಲ್ಲಿ ನದಿ ಪಾತ್ರಗಳ ಜನರು ನೀರಿಗೆ ಇಳಿಯಬಾರದು. ತಗ್ಗು ಪಾತ್ರಗಳ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.

ತಾಲ್ಲೂಕಿನ ಮಂದಗೆರೆ, ಚಿಕ್ಕಮಂದಗೆರೆ, ಗೊಂದಿಹಳ್ಳಿ, ಬಂಡಿಹೊಳೆ, ಶ್ರವಣಹಳ್ಳಿ, ಬೇವಿನಹಳ್ಳಿ, ಗದ್ದೆಹೊಸೂರು, ಬೇವಿನಹಳ್ಳಿಕೊಪ್ಪಲು, ಹೇಮಗಿರಿ, ತ್ರಿವೇಣಿ ಸಂಗಮ ಹಾಗೂ ಸೋಮನಾಥಪುರ ಗ್ರಾಮಗಳಿಗೆ ಇಂದು ಭೇಟಿ ನೀಡಿದ ತಹಶೀಲ್ದಾರ್ ಎಂ.ವಿ.ರೂಪ ನದಿ ಪಾತ್ರದ ಮನೆಗಳು ಹಾಗೂ ಜಮೀನುಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ನದಿಯ ನೀರಿನ ಪ್ರವಾಹದ ಮಟ್ಟವು ಏರಿಕೆಯಾಗುವ ಸಾಧ್ಯತೆಗಳಿರುವುದರಿಂದ ಜನಸಾಮಾನ್ಯರು ಹಾಗೂ ರೈತಬಾಂಧವರು ಬಟ್ಟೆಬರೆ, ಜಾನುವಾರು ತೊಳೆಯಲು ಅಥವಾ ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು ಎಂದು ಮನವಿ ಮಾಡಿದರು.

ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಜನರು ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರವಾಗಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಅಕ್ಕಿಹೆಬ್ಬಾಳು ಹೋಬಳಿಯ ರಾಜಸ್ವ ನಿರೀಕ್ಷಕ ನರೇಂದ್ರ, ಗ್ರಾಮ ಲೆಕ್ಕಾಧಿಕಾರಿ ರಾಘವೇಂದ್ರ, ಪೂಜಾ, ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರಮೋದ್ ಮತ್ತು ಬಂಡಿಹೊಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!