ನಾಗಮಂಗಲ ತಾಲ್ಲೂಕು ಶಿಖರಹಳ್ಳಿ ಗ್ರಾಮದ ಕವಿತ ಕೆ. ಶಿವಕುಮಾರ್ ಎಂಬುವರು ಮೇ 28ರಂದು ಮಧ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ಅವರ ತೋಟದಲ್ಲಿ ಎಮ್ಮೆಗಳನ್ನು ಮೇಯಿಸುತ್ತಿದ್ದಾಗ ಮೋಟಾರ್ ಬೈಕಿನಲ್ಲಿ ಬಂದ ಇಬ್ಬರು ವಿಳಾಸ ಕೇಳುವ ನೆಪದಲ್ಲಿ ಬಂದು ಕುತ್ತಿಗೆಯಲ್ಲಿದ್ದ ಸುಮಾರು 70 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆ ಸಂಬಂಧ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ನಾಗಮಂಗಲ ಡಿವೈಎಸ್ಪಿರವರ ಉಸ್ತುವಾರಿಯಲ್ಲಿ, ನಾಗಮಂಗಲ ವೃತ್ತದ ಪೊಲಿಸ್ ಇನ್ಸ್ಪೆಕ್ಟರ್ ಕೆ.ಎನ್. ಸುಧಾಕರ್, ನೇತೃತದಲ್ಲಿ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
ಜುಲೈ 11ರಂದು ನಾಗಮಂಗಲ ತಾಲ್ಲೂಕಿನ ಅಟ್ಟಹಳ್ಳಿ ಸರ್ಕಲ್ ಬಳಿ ಬೆಂಗಳೂರಿನ ಲಗ್ಗೆರೆ ವಾಸಿ ಮತ್ತು ತುಮಕೂರು ಜಿಲ್ಲೆಯ ವಿಠಲಾಪುರದ ವಾಸಿಗಳಾದ ಇಬ್ಬರು ಆರೋಪಿಗಳನ್ನು ಪತ್ತೆ ಮಾಡಿ ಬೈಕ್ ಸಮೇತ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿ ದಾಗಿ ಸರಗಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳಿಂದ ಪ್ರಕರಣದಲ್ಲಿ ಸುಲಿಗೆಯಾಗಿದ್ದ ಸುಮಾರು ಎರಡು ಲಕ್ಷ ರೂ.ಮೌಲ್ಯದ 70 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.
ಈ ಪತ್ತೆ ಕಾರ್ಯದ ತಂಡವನ್ನು ಮಾನ್ಯ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಅವರು ಶ್ಲಾಘಿಸಿದ್ದಾರೆ.