ಕಳೆದ 5 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ತಂದೆ-ತಾಯಿಗಳ ವಿಚ್ಚೇದನ ಪ್ರಕರಣದಲ್ಲಿ ಹೆತ್ತ ಮಗಳೇ ನ್ಯಾಯ ನಿಷ್ಕರ್ಷೆ ಮಾಡಿದ ಕಾರಣ, ಸತಿ-ಪತಿಗಳು ಒಂದಾಗಿ ವಿಚ್ಛೇದನ ಪ್ರಕರಣವು ಸುಖಾಂತ್ಯ ಕಂಡ ಘಟನೆ ಮಂಡ್ಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಜರುಗಿದೆ.
ಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಪರಿಮಳ ಹಾಗೂ ರಾಮಣ್ಣ (ಗೌಪ್ಯತೆಗಾಗಿ ಹೆಸರುಗಳನ್ನು ಬದಲಿಸಲಾಗಿದೆ) ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು, 2019ರಲ್ಲಿ ದಂಪತಿಗಳಿಬ್ಬರು ವಿಚ್ಚೇದನಕ್ಕಾಗಿ ನ್ಯಾಯಾಲಯದ ಮಟ್ಟಿಲೇರಿದ್ದರು, ಈ ಪ್ರಕರಣವು ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬರದೇ ನೆನೆಗುದಿಗೆ ಬಿದ್ದಿತ್ತು. ಇದರಿಂದ ವಕೀಲರು ಈ ಪ್ರಕರಣವನ್ನು ಲೋಕಾ ಅದಾಲತ್ ಮೂಲಕ ಇತ್ಯರ್ಥ ಮಾಡಿಕೊಳ್ಳಲು ಸಲಹೆ ನೀಡಿದ್ದರು.
ಅದರಂತೆ ಲೋಕಲತ್ ನಲ್ಲಿ ಮಂಡ್ಯದ ಪ್ರಧಾನ ಸಿವಿಲ್ ಹಿರಿಯ ನ್ಯಾಯಾಧೀಶ ವಿಜಯಕುಮಾರ್ ಅವರ ಸಮ್ಮುಖದಲ್ಲಿ ನಡೆದ ರಾಜಿ ಸಂಧಾನ ನಡೆಯುವ ಸಂದರ್ಭದಲ್ಲಿ ನ್ಯಾಯಾಧೀಶರು, ನ್ಯಾಯ ನಿಷ್ಕರ್ಷೆ ಮಾಡುವುದಕ್ಕಾಗಿ ಆ ದಂಪತಿಗಳ 5ನೇ ತರಗತಿಯ ಓದುತ್ತಿರುವ ಮಗಳನ್ನು ಪಕ್ಕಕ್ಕೆ ಕರೆದು ಕೂರಿಸಿಕೊಂಡು, ತನ್ನ ನಿರ್ಧಾರ ತಿಳಿಸುವಂತೆ ಪ್ರೋತ್ಸಾಹಿಸಿದರು. ಆಗ ಆಕೆ ‘ನನಗೆ ತಾಯಿಯ ಮಮತೆಯೂ ಬೇಕು, ತಂದೆಯ ಬೆಂಬಲವು ಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದಳು. ಇದರಿಂದ ಮನಕರಗಿದ ದಂಪತಿಗಳು ,ವಿಚ್ಚೇದನ ಪ್ರಕರಣವನ್ನು ವಾಪಸ್ ಪಡೆದು, ದಾಂಪತ್ಯವನ್ನು ಮುಂದುವರಿಸುವ ನಿರ್ಧಾರಕ್ಕೆ ಬಂದರು.
ಇತ್ತೀಚಿನ ದಿನಗಳಲ್ಲಿ ವಿಚ್ಚೇದನವಾಗುವ ಪ್ರಕರಣಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಈ ದಂಪತಿಗಳು ಮಗಳಿಗಾಗಿ ಒಂದುಗೂಡಿದ್ದು, ವಿಶೇಷವಾಗಿದೆ ಎಂದು ನ್ಯಾಯವಾದಿ ಬಿ.ಟಿ.ವಿಶ್ವನಾಥ್ ‘ನುಡಿಕರ್ನಾಟಕ.ಕಾಂ‘ ಗೆ ತಿಳಿಸಿದ್ದಾರೆ. ಗೃಹಿಣಿ ಪರವಾಗಿ ನ್ಯಾಯವಾದಿಗಳಾದ ಬಿ.ಟಿ ವಿಶ್ವನಾಥ್, ಪಲ್ಲವಿ ಮತ್ತು ಆನಂದ್ ವಕಾಲತ್ತು ವಹಿಸಿದ್ದರು.