ಹಣಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ ತಾ.ಪಂ.ಮಾಜಿ ಸದಸ್ಯ ದೊಡ್ಡಯ್ಯ ಕುರುಬ ಸಮುದಾಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆಂದು ತಾ.ಪಂ.ಮಾಜಿ ಅಧ್ಯಕ್ಷ ಚಿಕ್ಕಲಿಂಗಯ್ಯ ಆರೋಪಿಸಿದರು.
ಮಳವಳ್ಳಿ ಪಟ್ಟಣದ ರೈತ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಹಣಕ್ಕಾಗಿ ಜೆಡಿಎಸ್ ಪಕ್ಷ ಬೆಂಬಲಿಸಿ ಕಾಂಗ್ರೆಸ್ನಿಂದ ಹೊರ ಹೋದವನು ದೊಡ್ಡಯ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾತನಾಡಿಸಿ, ಅಭಿನಂದಿಸಿ ಬರೋಣ ಎಂದು ಹೇಳಿ ಕುರುಬ ಸಮುದಾಯದ ಹಲವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು
ಬೆಂಗಳೂರಿಗೆ ಕರೆದುಕೊಂಡು ಹೋಗಿ, ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾನೆ ಎಂದರು.
ಸಿದ್ದರಾಮಯ್ಯ ಅವರ ಬಳಿ ಹೋಗಿ ಮೂರ್ತಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕೆಂದು ಕೇಳಿ ಕೊಂಡಾಗ, ಅವರು ದೊಡ್ಡಯ್ಯನಿಗೆ ಚೆನ್ನಾಗಿ ಬೈದು ಕಳಿಸಿದ್ದಾರೆ. ಆದರೆ ದೊಡ್ಡಯ್ಯ ನರೇಂದ್ರಸ್ವಾಮಿ ಅವರನ್ನು ಹೊರತು ಪಡಿಸಿ ಟಿಕೆಟ್ ನೀಡಬೇಕೆಂದು ಸಿದ್ದರಾಮಯ್ಯ ಅವರನ್ನು ಕೇಳಿಕೊಂಡಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆಂದು ಸುಳ್ಳು ಹೇಳಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕಿ ಮಲ್ಲಾಜಮ್ಮ, ಡಾ.ಮೂರ್ತಿ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಿರುವ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅವರು ನಮ್ಮ ಸಮುದಾಯಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲು ಮಳವಳ್ಳಿ ಕ್ಷೇತ್ರದಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಕುರುಬ ಸಮುದಾಯ ಬೆಂಬಲ ನೀಡಲಿದೆ ಎಂದರು.
ಕೆಪಿಸಿಸಿ ಸದಸ್ಯ ಸಿದ್ದೇಗೌಡ ಮಾತನಾಡಿ, ಸಿದ್ದರಾಮಯ್ಯ ಅವರ ಜೊತೆಯಲ್ಲಿ ಕುರುಬ ಸಮುದಾಯವೇ ನಿಲ್ಲಲಿದೆ. ಮಳವಳ್ಳಿ ಕ್ಷೇತ್ರದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅವರ ಪರವಾಗಿ ಬೆಂಬಲ ಸೂಚಿಸುತ್ತೇವೆಂದು ತಿಳಿಸಿದರು.
ಶೆಟ್ಟಹಳ್ಳಿ ಗ್ರಾಮದ ಮುಖಂಡ ಲಿಂಗರಾಜು ಮಾತನಾಡಿ, ಸಿದ್ದರಾಮಯ್ಯ ಅವರ ಬಳಿ ಚೆನ್ನಾಗಿ ಬೈಸಿಕೊಂಡ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಹೋಗಿ ಅಲ್ಲಿಯೂ ಮೂರ್ತಿ ಅವರಿಗೆ ಟಿಕೆಟ್ ನೀಡಬೇಕೆಂದು ಕೇಳಿದಾಗ, ಅದಕ್ಕೆ ಖರ್ಗೆ ಅವರು, ಕರ್ನಾಟಕದಲ್ಲಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ,
ಪರಮೇಶ್ವರ್ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಅಂಕಿತ ಹಾಕುತ್ತೇನೆ ಎಂದು ದೊಡ್ಡಯ್ಯ ನಿಗೆ ಸರಿಯಾಗಿ ಹೇಳಿ ಕಳಿಸಿದ್ದಾರೆ. ದೊಡ್ಡಯ್ಯನ ಮಾತಿಗೆ ನಮ್ಮ ಸಮುದಾಯ ಯಾವ ಬೆಲೆಯೂ ಕೊಡುವುದಿಲ್ಲ ಎಂದರು.
ಸಭೆಯಲ್ಲಿ ಮುಖಂಡರಾದ ಪುಟ್ಟಣ್ಣ, ಜವರೇಗೌಡ, ಮಹದೇವು ಸೇರಿದಂತೆ ಇತರರಿದ್ದರು.