ವರದಿ : ಪ್ರಭು ವಿ.ಎಸ್.
ಇತರೆ ಪಕ್ಷದಂತೆ ನಮ್ಮ ಪಕ್ಷದಲ್ಲೂ ಕೂಡ ಅಸಮಧಾನವಿದ್ದು ಪಕ್ಷದ ನಾಯಕರು ಆದಷ್ಟು ಬೇಗ ಸರಿಪಡಿಸಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಕ್ರಮ ವಹಿಸಲಿದ್ದಾರೆಂದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮದ್ದೂರು ತಾಲೂಕಿನ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಭಿನ್ನಭಿಪ್ರಾಯ ಎದ್ದಿರುವುದು ನಿಜವಾಗಿದ್ದು ಇತರೆ ಪಕ್ಷಗಳಂತೆ ನಮ್ಮ ಪಕ್ಷದಲ್ಲೂ ಟಿಕೆಟ್ ವಂಚಿತರು ಅಸಮಧಾನ ವ್ಯಕ್ತಪಡಿಸುತ್ತಿದ್ದು ಅದನ್ನು ಪಕ್ಷದಲ್ಲೇ ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಾಗಿ ಹೇಳಿದರು.
ಕೆಪಿಸಿಸಿ ಸದಸ್ಯ ಎಸ್. ಗುರುಚರಣ್ ಅವರಿಗೆ ಟಿಕೆಟ್ ತಪ್ಪಿರುವುದರಿಂದ ಆಸೆ ನಿರಾಶೆಯಾಗಿದ್ದು ಈಗಾಗಿ ಅದನ್ನು ಸರಿಪಡಿಸಲಿದ್ದು ಈ ಸಂಬಂಧ ಗುರುಚರಣ್ ಅವರ ಜತೆ ಮಾತುಕತೆ ನಡೆಸಿದ್ದು ಬಹುತೇಕ ಸಮಸ್ಯೆ ಬಗೆಹರಿಯಲಿರುವುದಾಗಿ ಹೇಳಿದರು.
ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾದಾಗ ಪೋಸ್ಟರ್ ಮತ್ತು ಬ್ಯಾನೆರ್ಗಳಿಗೆ ಬೆಂಕಿ ಹಚ್ಚುವುದು ಇನ್ನಿತರೆ ಚಟುವಟಿಕೆ ಕೈಗೊಳ್ಳುವುದು ಸಾಮಾನ್ಯವಾಗಿದ್ದು, ಕಾಂಗ್ರೆಸ್ ಕಚೇರಿಯಲ್ಲಿ ಕೈ ನಾಯಕರ ಪೋಸ್ಟರ್ಗೆ ಬೆಂಕಿ ಹಚ್ಚಿದ ವ್ಯಕ್ತಿಗಳ ವಿರುದ್ಧ ಯಾವುದೇ ಶಿಸ್ತು ಕ್ರಮ ಜರುಗಿಸುವುದಿಲ್ಲವೆಂದರು.
ಗುರುಚರಣ್ ಅವರಿಗೆ ಗೆಲ್ಲುವ ಸಾಮರ್ಥ್ಯ ಇತ್ತು ಆದರೂ ಈ ರೀತಿಯಾಗಿ ಟಿಕೆಟ್ ಕೈ ತಪ್ಪಿದ್ದು ಕಾರ್ಯಕರ್ತರಿಗೆ ನೋವಾದಾಗ ದಿಕ್ಕಾರ ಕೂಗ್ತಾರೆ ಸಮಾಧಾನವಾದಾಗ ಜೈಕಾರ ಹಾಕುತ್ತಾರೆಂದರು.
ಜೈಕಾರ- -ಸ್ವೀಕಾರ ಮಾಡಿದ ರೀತಿ ದಿಕ್ಕಾರವನ್ನೂ ಕೂಡ ನಾವು ಸ್ವೀಕಾರ ಮಾಡಬೇಕಾಗುತ್ತದೆ ಮುಂದಿನ ದಿನಗಳಲ್ಲಿ ಪಕ್ಷದ ನಾಯಕರು ಅಂತಿಮ ತೀರ್ಮಾನ ಕೈಗೊಂಡು ಅಸಮಧಾನಿತ ವ್ಯಕ್ತಿಗಳೊಂದಿಗೆ ಚರ್ಚೆ ನಡೆಸಿ ಶೀಘ್ರವೇ ಪರಿಹಾರ ಕಂಡುಕೊಂಡು ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆಂದರು.
ಈ ವೇಳೆ ಮಾಜಿ ಶಾಸಕ ಬಿ. ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗೀಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ್, ಮುಖಂಡರಾದ ಕುಮಾರಕೊಪ್ಪ, ಮರಳಿಗಸ್ವಾಮಿ, ಬಿ.ಎಂ. ರಘು ಇತರರಿದ್ದರು.