ರಾಜ್ಯ ಸರ್ಕಾರವು ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನ ಮಾಡುವುದನ್ನು ವಿರೋಧಿಸಿ ರೇಷ್ಮೆ ಬೆಳೆಗಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು.
ಇಲಾಖೆಗಳನ್ನು ವಿಲೀನಗೊಳಿಸುವ ಮೂಲಕ ರಾಜ್ಯದ 1,38,964 ರೇಷ್ಮೆ ಬೆಳೆಗಾರರ ಕುಟುಂಬವನ್ನು ವಿನಾಶ ಮಾಡುವ ಹಾಗೂ 2346 ಹುದ್ದೆಗಳನ್ನು ರದ್ದು ಮಾಡುವ ಸರ್ಕಾರ ನಿರ್ಧಾರ ಖಂಡನೀಯ. ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯಲ್ಲಿ ರೇಷ್ಮೆ ಕೃಷಿ ಪ್ರಮುಖ ಪಾತ್ರ ವಹಿಸುತ್ತಿದೆ. ಬಹಳಷ್ಟು ನಿರುದ್ಯೋಗಿ ವಿದ್ಯಾವಂತ ಯುವಜನರು ರೇಷ್ಮೆ ಬೆಳೆ ಅವಲಂಬಿಸಿದ್ದಾರೆ, ಹೀಗಿರುವಾಗ ಇಲಾಖೆಗಳ ವಿಲೀನ ಅವೈಜ್ಞಾನಿಕ ಎಂದು ಹೇಳಿದರು.
ರೇಷ್ಮೆ ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕದ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಹೀಗಿರುವಾಗ ಇಲಾಖೆಗೆ ಹೆಚ್ಚಿನ ಅನುದಾನ ನೀಡಿ, ದೊಡ್ಡ ಉದ್ಯಮವನ್ನಾಗಿ ಮಾಡಲು ಸರ್ಕಾರ ಗಮನಹರಿಸಬೇಕು. ವಿಲೀನ ಪ್ರಕ್ರಿಯೆಯನ್ನು ಕೈಬಿಡಬೇಕು. ರೇಷ್ಮೆ ಹುಳು ಸಾಕಾಣಿಕೆ ಮನೆಗೆ ನೀಡುವ ಅನುದಾನದ ಮೊತ್ತ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಸಹ ಕಾರ್ಯದರ್ಶಿ ಎನ್.ಎಲ್.ಭರತ್ರಾಜ್, ಸಿದ್ದೇಗೌಡ, ಶಿವಲಿಂಗು, ಲಿಂಗರಾಜಮೂರ್ತಿ, ಬನ್ನಹಳ್ಳಿ ಶಿವು, ನಾರಾಯಣಗೌಡ ಪ್ರತಿಭಟನೆ ನೇತೃತ್ವವಹಿಸಿದ್ದರು.