ಕೇಂದ್ರ ಸರ್ಕಾರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹಾಗೂ ಜಲಮೂಲಗಳ ಪುನರುಜ್ಜೀವನಗೊಳಿಸಲು ಅಮೃತ್ 2.0 ಯೋಜನೆಯನ್ನು ಜಾರಿಗೊಳಿಸಿದ್ದು, ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಅಮೃತ 2.0, ಪಿ.ಎಂ ಸ್ವನಿಧಿ, ಪಿ.ಎಂ.ಎಫ್. ಎಂ.ಇ, ಸ್ವಚ್ಛ ಭಾರತ್ ಮಿಷನ್, ನಗರ ವ್ಯಾಪ್ತಿಯ ಪ್ರಧಾನ ಮಂತ್ರಿ ಆವಾಸ್ ಯೋಜನೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಅಮೃತ್ 2.0 ಯೋಜನೆಯನ್ನು ಪಾಂಡವಪುರ ಪಟ್ಟಣಕ್ಕೆ ರೂ 23.22 ಕೋಟಿ, ಕೆ.ಆರ್. ಪೇಟೆ ಪಟ್ಟಣಕ್ಕೆ ರೂ 36.61 ಕೋಟಿ, ಬೆಳ್ಳೂರು ಪಟ್ಟಣಕ್ಕೆ ರೂ 31.06 ಕೋಟಿ ಹಾಗೂ ನಾಗಮಂಗಲ ಪಟ್ಟಣಕ್ಕೆ ರೂ 36.07 ಕೋಟಿ ಕುಡಿಯುವ ನೀರು ಸರಬರಾಜಿಗಾಗಿ ಯೋಜನೆಗಳು ಸಿದ್ದಪಡಿಸಿದ್ದು, ಈ ಕುರಿತಂತೆ ಸಂಸದರು ಪ್ರಗತಿ ಪರಿಶೀಲನೆ ನಡೆಸಿದರು.
ಪಿ.ಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ರೂ 10,000 ಸಾಲ ನೀಡಲಾಗುತ್ತಿದೆ. ಸಾಲ ಪಡೆದವರಿಗೆ ಸಾಲ ತೀರಿಸಿದ ನಂತರ ಅವರಿಗೆ ವ್ಯಾಪಾರ ಕೈಗೊಳ್ಳಲು ರೂ 50,000 ಸಾಲ ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಿದರೆ ಬೀದಿಬದಿ ವ್ಯಾಪಾರಿಗಳು ಸಾಲ ಪಡೆದು ವ್ಯಾಪರ ನಡೆಸಿ ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2015-16 ನೇ ಸಾಲಿನಿಂದ 2021-22 ನೇ ಸಾಲಿನಲ್ಲಿ 1,283 ಮನೆಗಳು ಅನುಮೋದನೆಯಾಗಿದ್ದು, 948 ಪೂರ್ಣಗೊಂಡಿರುತ್ತದೆ. 278 ಪ್ರಗತಿಯಲ್ಲಿದ್ದು, 57 ಇನ್ನೂ ಪ್ರಾರಂಭವಾಗಿರುವುದಿಲ್ಲ. ಪ್ರಾರಂಭವಾಗದೇ ಇರುವ ಮನೆಗಳ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಿ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರ ಮಣಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.