ಮಂಡ್ಯದಲ್ಲಿ ನ್ಯಾಯಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರು ನಿನ್ನೆ ಮಂಡ್ಯದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಬಳಿ ತಮ್ಮ ಅಹವಾಲು ಹೇಳಿಕೊಳ್ಳಲು ಹೋದಾಗ, ಸರ್ಕಾರ ಪೊಲೀಸರನ್ನು ಬಿಟ್ಟು ಅವರ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿದೆ, ಇದು ಖಂಡನೀಯ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಸೌಜನ್ಯಕ್ಕಾದರೂ ರೈತರನ್ನು ಮಾತನಾಡಿಸಬೇಕಿತ್ತು. ಟನ್ ಕಬ್ಬಿಗೆ 4.500 ರೂ.ನಿಗದಿ ಮಾಡುವುದು ಸೇರಿದಂತೆ ಬೆಂಬಲ ಬೆಲೆಗೆ ಒತ್ತಾಯಿಸಿ ಕಳೆದ ನಾಲ್ಕೈದು ದಿನಗಳಿಂದ ಧರಣಿ ಆರಂಭಿಸಿದ್ದಾರೆ. ಈ ಎಲ್ಲಾ ಮಾಹಿತಿಗಳು ಗೃಹ ಸಚಿವರಿಗೆ ಗೊತ್ತಿರುತ್ತದೆ, ಆದರೆ ಕನಿಷ್ಠ ಸೌಜನ್ಯಕ್ಕಾದರೂ ರೈತರನ್ನು ಮಾತನಾಡಿಸದೇ ಇರುವುದು ಖಂಡನೀಯ ಎಂದಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರೊಬ್ಬರ ಕೊರಳ ಪಟ್ಟಿಯನ್ನು ಹಿಡಿದು ಸರ್ಕಲ್ ಇನ್ಸ್ಪೆಕ್ಟರ್ ಒಬ್ಬರು ದರ್ಪ ಪ್ರದರ್ಶನ ಮಾಡಿದ್ದಾರೆ. ಇಂತಹ ಘಟನೆಗಳು ಬಿಜೆಪಿ ಸರ್ಕಾರದಲ್ಲಿ ಸಾಮಾನ್ಯವಾಗಿ ಬಿಟ್ಟಿವೆ, ಮುಂಬರುವ ಚುನಾವಣೆಯಲ್ಲಿ ಇಂತಹ ಸರ್ಕಾರದ ವಿರುದ್ಧ ಜನರು ಸೂಕ್ತ ತೀರ್ಪು ನೀಡಲಿದ್ದಾರೆ ಎಂದಿದ್ದಾರೆ.