ಕಾವೇರಿ ಕೊಳ್ಳದ ರೈತರಿಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕಾವೇರಿ ಪ್ರಾಧಿಕಾರದಿಂದ ಅನ್ಯಾಯ ಆಗಿರುವುದನ್ನು ಖಂಡಿಸಿ ಇಂದು ನಾಗಮಂಗಲ ತಾಲೂಕು ಕಚೇರಿ ಆವರಣದಲ್ಲಿ ನಾಗಮಂಗಲ ತಾಲ್ಲೂಕು ವಕೀಲರ ಸಂಘದ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಹಿರಿಯ ವಕೀಲ ಟಿ.ಕೆ.ರಾಮೇಗೌಡ ಮಾತನಾಡಿ, ಪದೇ ಪದೇ ಕರ್ನಾಟಕದ ರೈತರಿಗೆ ಕಾವೇರಿ ವಿಚಾರದಲ್ಲಿ ಅನ್ಯಾಯವಾಗುತ್ತಿದ್ದು, ಸುಪ್ರೀಂಕೋರ್ಟ್ ಈ ತಕ್ಷಣ ಸತ್ಯಶೋಧನ ಸಮಿತಿ ರಚನೆ ಮಾಡಿ, ಮಂಡ್ಯ ಭಾಗದ ರೈತರಿಗೆ ಅನ್ಯಾಯವಾಗದಂತೆ ತಡೆಗಟ್ಟಬೇಕೆಂದರು
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಆರ್.ಮಂಜುನಾಥ ಮಾತನಾಡಿ, ರಾಜಕಾರಣಿಗಳು ಅಧಿಕಾರಕ್ಕೆ ಬರುವತನಕ ಜನತೆಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾರೆ, ಕಾವೇರಿ ವಿಚಾರದಲ್ಲಿ ರಾಜಕಾರಣಿಗಳ ಬೇಜಾರಿತನವೇ ಕಾರಣವಾಗಿದೆ. ಇವರಿಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಬದ್ಧತೆ ಇಲ್ಲ ಎಂದರು.
ವಕೀಲ ಹಡೇನಹಳ್ಳಿ ಉಮೇಶ್ ಮಾತನಾಡಿ, ಕಾವೇರಿ ಜಲಾನಯನ ಭಾಗದ ರೈತರಿಗೆ ಅನ್ಯಾಯವಾಗುತ್ತಿದ್ದು, ಈ ಸಂಬಂಧ ಕಾಂಗ್ರೆಸ್ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಲಿ ಎಂದರು.
ಈ ಸಂದರ್ಭದಲ್ಲಿ ನಾಗಮಂಗಲ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಭಾಗವಹಿಸಿದ್ದರು