“ಗೋಧ್ರಾ ಮಾದರಿಯಲ್ಲಿ ಮತ್ತೊಂದು ಘಟನೆ ನಡೆಯಬಹುದು. ಅಯೋಧ್ಯೆಗೆ ತೆರಳುವವರಿಗೆ ರಕ್ಷಣೆ ನೀಡಿ” ಎಂಬ ಹೇಳಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರನ್ನ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ತಮ್ಮ ವಿರುದ್ದವೇ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿರುವ ಹರಿಪ್ರಸಾದ್, “ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರವೋ? ಆರ್ಎಸ್ಎಸ್ ಸರ್ಕಾರವೋ?” ಎಂದು ಕೇಳಿದ್ದಾರೆ.
ಕೆಕೆ ಗೆಸ್ಟ್ ಹೌಸ್ ನಲ್ಲಿ ಸಿಸಿಬಿ ಪೊಲೀಸರು ಬಿಕೆ ಹರಿಪ್ರಸಾದ್ ಅವರನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ, “ವಿವಿಐಪಿ ಟ್ರೀಟ್ ಮೆಂಟ್ ಏನೂ ಬೇಡ. ಬೇಕಾದರೆ ಅರೆಸ್ಟ್ ಮಾಡಿ, ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿ. ಬಹಿರಂಗವಾಗಿ ಮಂಪರು ಪರೀಕ್ಷೆ ಮಾಡಿ. ನಮ್ಮದೇ ಸರ್ಕಾರದಲ್ಲಿ ನನ್ನ ವಿಚಾರಣೆ ನಡೆದಿದೆ. ನನ್ನ ಜೀವನದಲ್ಲಿ ಯಾವುದೇ ಕೇಸ್ ಇಲ್ಲ. ಕಾಂಗ್ರೆಸ್ ಸರ್ಕಾರ ವಿಚಾರಣೆ ನಡೆಸಿರೋದು ಆಶ್ಚರ್ಯ. ಇದು ಕಾಂಗ್ರೆಸ್ ಸರ್ಕಾರನಾ? ಅಥವಾ ಆರ್ಎಸ್ಎಸ್ ಸರ್ಕಾರನಾ?” ಎಂದು ಬಿ.ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ ಕೆ ಹರಿಪ್ರಸಾದ್, “ಗೋಧ್ರಾ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಗೋಧ್ರಾ ರೀತಿಯಲ್ಲಿ ಮತ್ತೊಂದು ಘಟನೆ ನಡೆಯುತ್ತದೆ. ಅದಕ್ಕೆ ಷಡ್ಯಂತ್ರ ನಡೆಯುತ್ತಿದೆ ಎಂದು ನನಗೆ ಮಾಹಿತಿ ಬಂದಿತ್ತು. ಅದನ್ನು ಬಹಿರಂಗವಾಗಿ ತಿಳಿಸಿದ್ದೆ. ಮುಸ್ಲಿಮರ ಮಸೀದಿಯನ್ನು ಒಡೆದು ಹಾಕುತ್ತೇನೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ದ ಕ್ರಮ ಕೈಗೊಂಡಿಲ್ಲ. ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ದವೂ ಈ ಸರ್ಕಾರ ಕ್ರಮ ಕೈಗೊಂಡಿಲ್ಲ. ಆದರೆ ನನ್ನ ವಿರುದ್ದ ವಿಚಾರಣೆಗೆ ಪೊಲೀಸರನ್ನ ಕಳಿಸಿದ್ದಾರೆ. ಮೂರು ಭಾಗವಾಗಿದ್ದಾಗಲೇ ನಾನು ಕಾಂಗ್ರೆಸ್ ಬಿಟ್ಟಿಲ್ಲ. ಬೆದರಿಕೆಗಳಿಗೆಲ್ಲ ನಾನು ಬಗ್ಗಲ್ಲ” ಎಂದು ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೃಪೆ: ಈದಿನ.ಕಾಂ