ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ, ಮೇಲುಕೋಟೆ ಕ್ಷೇತ್ರದ ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್.
ಪಾಂಡವಪುರ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರ ಒತ್ತಾಯದ ಮೇರೆಗೆ ಡಾ.ಇಂದ್ರೇಶ್ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಿ ಜನರ ಮೆಚ್ಚುಗೆ ಗಳಿಸಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಮೇಲುಕೋಟೆ ಹೋಬಳಿಯ ತಾಳೆಕೆರೆ ಸೇರಿದಂತೆ ಇನ್ನಿತರ ಗ್ರಾಮಕ್ಕೆ ಡಾ.ಇಂದ್ರೇಶ್ ಭೇಟಿ ಕೊಟ್ಟ ಸಂದರ್ಭದಲ್ಲಿ ಗ್ರಾಮಸ್ಥರು ಇಂದ್ರೇಶ್ ಬಳಿ, ನಮ್ಮ ಗ್ರಾಮಕ್ಕೆ ಅನೇಕ ವರ್ಷಗಳಿಂದ ಬಸ್ ವ್ಯವಸ್ಥೆ ಇಲ್ಲ. ದಯವಿಟ್ಟು ನಿಮ್ಮ ಪಕ್ಷವೇ ಅಧಿಕಾರದಲ್ಲಿದೆ. ಬಿಜೆಪಿ ಸರ್ಕಾರದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ನೊಂದು ಸಮಸ್ಯೆ ಹೇಳಿಕೊಂಡಿದ್ದರು.
ಆ ಸಂದರ್ಭದಲ್ಲಿ ಡಾ.ಇಂದ್ರೇಶ್ ಅವರು, ಇನ್ನು ಒಂದು ತಿಂಗಳಲ್ಲಿ ಬಸ್ ವ್ಯವಸ್ಥೆ ಕಲ್ಪಿಸುತ್ತೇನೆ. ಒಂದು ವೇಳೆ ಬಸ್ ವ್ಯವಸ್ಥೆ ಕಲ್ಪಿಸದಿದ್ದರೆ ಗ್ರಾಮಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದರು.
ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಕೆ.ಎಸ್.ಈಶ್ಚರಪ್ಪ ಅವರಿಗೆ ಡಾ.ಇಂದ್ರೇಶ್ ಅಧಿಕೃತವಾಗಿ ಪತ್ರ ಬರೆದು ಸಾರಿಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು.
ಡಾ.ಇಂದ್ರೇಶ್ ಅವರ ಮನವಿಯ ಮೇರೆಗೆ ಮೇಲುಕೋಟೆ ಸನ್ನಿಧಿ, ಗೌರಿಕಟ್ಟೆ ವೃತ್ತ, ಕನಗನಹಳ್ಳಿ, ತಾಳೆಕೆರೆ ಮಾರ್ಗವಾಗಿ ನಾಗಮಂಗಲ ತಾಲ್ಲೂಕಿನ ಬೋಗಾದಿಗೆ ದಿನನಿತ್ಯ ಐದಾರು ಬಾರಿ ಸಂಚರಿಸುವ ಕೆಎಸ್ಆರ್ ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಸ್ ಸಂಚಾರ ಪ್ರಾರಂಭಗೊಂಡಿದೆ.
ಗ್ರಾಮಸ್ಥರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡ ಡಾ.ಇಂದ್ರೇಶ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನುಡಿದಂತೆ ನಡೆದ ಡಾ.ಇಂದ್ರೇಶ್ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ,ಅವರ ಸೇವಾ ಕಾರ್ಯವನ್ನು ಶ್ಲಾಘಿಸಿದ್ದಾರೆ. ಜನಪ್ರತಿನಿಧಿಯಲ್ಲದಿದ್ದರೂ ಜನಪ್ರತಿನಿಧಿಯಂತೆ ಬಸ್ ಸೌಲಭ್ಯ ಕಲ್ಪಿಸಿದ ಡಾ.ಇಂದ್ರೇಶ್ ಮಾದರಿ ರಾಜಕಾರಣಿಯಾಗಿದ್ದಾರೆ.