ಕರಾಟೆ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು-ಸಂಯಮ, ಏಕಾಗ್ರತೆ ವೃದ್ದಿಸಿ, ಸ್ವ ರಕ್ಷಣಾತ್ಮಕ ಕಲೆ ಬೆಳೆಯುತ್ತದೆ ಎಂದು ”ನನ್ನಮ್ಮ ಸೂಪರ್ಸ್ಟಾರ್ ಸೀಜನ್-2” ವಿಜೇತ ಕರಾಟೆ ವಿದ್ಯಾರ್ಥಿಗಳಾದ ಚಿನ್ನಯ್-ಚಿರಂತ್ ತಾಯಿ ಚೈತ್ರ ಯೋಗೇಶ್ ಹೇಳಿದರು.
ಮಂಡ್ಯ ನಗರದ ಸಿದ್ಧಾರ್ಥ ಬಡಾವಣೆಯಲ್ಲಿರುವ ಎಂ.ಓ.ಬಿ.ಸಮುದಾಯ ಭವನದಲ್ಲಿ ನಡೆದ ಗೊಜು-ರಿಯೋ ಕರಾಟೆ ಡೋ ಅಕಾಡೆಮಿ ಇಂಡಿಯಾ, ವಿಎಲ್ಎಂ.ಎಎ ಕರಾಟೆ ಡೋ ಟ್ರೈನಿಂಗ್ ಸ್ಕೂಲ್, ವಿಷ್ಟು ಲಯನ್ಸ್ ಮಾರ್ಷಲ್ ಆರ್ಟ್ಸ್ ಅಸೋಷಿಯೇಷನ್ಸ್ ಆಯೋಜಿಸಿದ್ದ ರಾಜ್ಯಮಟ್ಟದ 6ನೇ ವರ್ಷದ ಮುಕ್ತ ಕರಾಟೆ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಕರಾಟೆ ಒಂದು ವರದಾನ, ನಮ್ಮ ಅವಳಿ-ಜವಳಿ ಮಕ್ಕಳಾದ ಚಿನ್ನಯ್-ಚಿರಂತ್ ಅವರು ಕರಾಟೆ ಕಲಿಕೆಯಿಂದ ಇಂದು ರಾಜ್ಯಮಟ್ಟದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡಿದ್ದಾರೆ, ಅವರ ಕರಾಟೆ ಪ್ರತಿಭೆಯಿಂದ ನಾವು “ನನ್ನಮ್ಮ ಸೂಪರ್ಸ್ಟಾರ್ ಸೀಜನ್-2″ರಲ್ಲಿ ವಿಜೇತರಾಗುವಂತೆ ಮಾಡಿದ್ದಾರೆ ಎಂದು ನುಡಿದರು.
ಕರಾಟೆ ತರಬೇತಿದಾರ ಲೋಕೇಶ್ ಮಾಸ್ಟರ್, ಮಾತನಾಡಿ, ಕೆಲವು ಪೋಷಕರು ವಿಶೇಷ ಕಾಳಜಿವಹಿಸಿ ಚಿಕ್ಕ ಚಿಕ್ಕ ಮಕ್ಕಳಿಗೆ ಕರಾಟೆ ಕಲಿಸಿ, ಪ್ರತಿಭಾವಂತರನ್ನಾಗಿ ಮಾಡುತಿದ್ದಾರೆ, ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿತು ಶಿಸ್ತು-ಸಂಯಮ, ಏಕಾಗ್ರತೆ ವೃದ್ದಿಸಿಕೊಂಡು ಉನ್ನತಮಟ್ಟಕ್ಕೆರಬೇಕು ಎಂದರು.
ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಕರಾಟೆ ಕಲೆ ಜಪಾನ್ ದೇಶದಲ್ಲಿ ಹುಟ್ಟಿದರೂ ಇದ್ದು ವಿಶ್ವದ 197 ರಾಷ್ಟ್ರಗಳು ಕರಾಟೆ ಕಲೆಯ ಕಲಿಕೆಯಲ್ಲಿವೆ, ವಿಶ್ವ ಒಲಂಪಿಕ್ ಕ್ರೀಡೆಯಲ್ಲಿ ಕರಾಟೆಗೆ ಮಾನ್ಯತೆ ನೀಡಬೇಕಿದೆ ಎಂದರು.
ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಲೋಕೇಶ್ ಮೊದಲಿಯಾರ್ ಅವರು, 6ನೇ ರಾಜ್ಯಮಟ್ಟದ ಮುಕ್ತ ಕರಾಟೆ ಪಂದ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ, ಇದರಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಕಲಿಕಾ ಆಸಕ್ತಿ ಹೆಚ್ಚಾಗುತ್ತದೆ, ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಿ ಎಂದು ನುಡಿದರು.
ಇದೇ ಸಂಧರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿ ವಿಜೇತರಾದ ಕರಾಟೆ ಪಟುಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಖೆ ಸಹಾಯಕ ನಿರ್ದೇಶಕ ಕೆ.ಎಂ.ಲೋಕೇಶ್, ಕಾರ್ಯಕ್ರಮ ಆಯೋಜಕ ವಿಷ್ಟು ಲಯನ್ಸ್ ಮಾರ್ಷಲ್ ಆರ್ಟ್ಸ್ ಅಸೋಷಿಯೇಷನ್ಸ್ ಕರಾಟೆ ತರಬೇತುದಾರ ಲೋಕೇಶ್ಮೊದಲಿಯಾರ್, ಶಿಕ್ಷಕಿ ಉಷಾ ಸಂಜಯ್, ಕರಾಟೆ ತೀರ್ಪುಗಾರರಾದ ಡಾ.ವಿನಯ್ಕುಮಾರ್, ವೆಂಟಕೇಶ್, ಅರುಣ್, ಪ್ರಭುದಾಸ್, ಶಿವು, ಭರತ್, ಸಚಿನ್, ಶಿವಕುಮಾರ್, ಪ್ರೇಮಕುಮಾರ್, ಮಹೇಶ್ ನಾಗಭರಣ್ ಮತ್ತಿತರರಿದ್ದರು.