ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.
ಭಾರತ ಐಕ್ಯತಾ ಯಾತ್ರೆ ಶ್ರೀರಂಗಪಟ್ಟಣದ ಪರಿವರ್ತನಾ ಶಾಲೆ ತಲುಪಿದ ಬಳಿಕ ಬಿಡುವಿನ ಸಮಯದಲ್ಲಿ ಶ್ರೀರಂಗಪಟ್ಟಣದಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ವಾಹನದಲ್ಲಿ ತೆರಳಿದರು.
ಚಾಮುಂಡೇಶ್ವರಿ ದೇವಾಲಯಕ್ಕೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮತ್ತಿತರ ಕಾಂಗ್ರೆಸ್ ನಾಯಕರ ಜೊತೆಗೂಡಿ ಆಗಮಿಸಿದರು.
ಅರ್ಚಕರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿ ರಾಹುಲ್ ಗಾಂಧಿಯವರಿಗೆ ತೀರ್ಥ, ಪ್ರಸಾದ ನೀಡಿ ಒಳಿತಾಗಲೆಂದು ಶುಭ ಹಾರೈಸಿದರು.
ರಾಹುಲ್ ಗಾಂಧಿ ಮಂಗಳಾರತಿ, ತೀರ್ಥ- ಪ್ರಸಾದ ಪಡೆದು ದೇವಸ್ಥಾನಕ್ಕೆ ಆಗಮಿಸಿದ್ದ ಜನರೊಂದಿಗೆ ಸಂತಸದಿಂದ ಬೆರೆತು ಹಸ್ತಲಾಘವ ಮಾಡಿ ಪಾದಯಾತ್ರೆಗೆ ತೆರಳಿದರು.