ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ 200 ಮೆ.ವ್ಯಾ ಸಾಮರ್ಥ್ಯದ ‘ಶಿವನಸಮುದ್ರ ರನ್-ಆಪ್-ದಿ-ರಿವರ್ (ಎಸ್.ಆರ್.ಆರ್.ಪಿ)’ ಯೋಜನೆಯನ್ನು ಅಂದಾಜು ಮೊತ್ತ ರೂ.893.65 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಸೋಮವಾರ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ಮಧು ಜಿ,ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಯೋಜನೆಯನ್ನು ಅನುಷ್ಠಾನಗೊಳಿಸಲು ಜೋನಲ್ ಮಾಸ್ಟರ್ ಪ್ಲಾನ್ ಸಮಿತಿಯ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
₹246.77 ಕೋಟಿ ಆದಾಯ
ಶಿಂಷಾ ಮತ್ತು ಶಿವನಸಮುದ್ರದಲ್ಲಿರುವ ಜಲ ವಿದ್ಯುತ್ ಕೇಂದ್ರಗಳ ಸ್ಥಾಪಿತ ಸಾಮರ್ಥ್ಯ 59.20 ಮೆ.ವ್ಯಾ. ಇದ್ದು, 2015-16 ರಿಂದ 2022-23ನೇ ಸಾಲಿನವರೆಗೆ ಒಟ್ಟು 2114,49 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಒಟ್ಟು ರೂ. 246.77 ಕೋಟಿ ಆದಾಯ ಗಳಿಸಿದ್ದರೆ, ದುರಸ್ತಿ, ಸುರಕ್ಷತೆಗಾಗಿ ರೂ. 34.91 ಕೋಟಿಗಳನ್ನು ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಲ್ಲಿ ಉತ್ಪಾದನೆ ಆಗುವ ವಿದ್ಯುತ್ ಅನ್ನು ಎಸ್ಕಾಂಗಳಿಗೆ ಹಂಚಿಕೆ ಮಾಡಲಾಗುತ್ತದೆ. ತರುವಾಯ ಎಸ್ಕಾಂಗಳು ವಿದ್ಯುತ್ ಅನ್ನು ರೈತರು, ಗೃಹಬಳಕೆ, ಕೈಗಾರಿಕೆ ಸೇರಿದಂತೆ ಇತರೆ ಉದ್ದೇಶಗಳಿಗಾಗಿ ಸರಬರಾಜು ಮಾಡುತ್ತದೆ ಎಂದು ತಿಳಿಸಿದ್ದಾರೆ.