ರಾಜ್ಯದಲ್ಲಿಯೇ ಮೊಟ್ಟ ಮೊದಲ ಖಾಸಗಿ ಕೃಷಿ ಕಾಲೇಜಾಗಿರುವ ಮದ್ದೂರು ತಾಲ್ಲೂಕಿನ ಕೆ.ಬಿ.ದೊಡ್ಡಿ ಗ್ರಾಮದಲ್ಲಿರುವ ಸಂಪೂರ್ಣ ಕೃಷಿ ವಿಜ್ಞಾನ ಸಂಸ್ಥೆಗೆ ರಾಷ್ಟ್ರೀಯ ಕೃಷಿ ಶಿಕ್ಷಣ ಮಾನ್ಯತೆ ಮಂಡಳಿ ( National Agricultural Education Accreditation Board)ಯ ಮಾನ್ಯತೆ ದೊರೆತಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಡಾ.ಸಂಪೂರ್ಣ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾಲಯದ ವಿಶೇಷ ಯೋಜನೆಯಡಿಯಲ್ಲಿ ಪ್ರಾರಂಭವಾದ ಈ ಸಂಸ್ಥೆಯ ಮೂಲ ಉದ್ದೇಶ ಯುವ ಸಮುದಾಯವನ್ನು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದಾಗಿದೆ. ಹೊಸ ಹೊಸ ಅನ್ವೇಷಣೆಯನ್ನು ತಂದು ಕೃಷಿಕರ ಆರ್ಥಿಕ ಗುಣಮಟ್ಟ ಸುಧಾರಿಸುವುದಾಗಿದೆ ಎಂದರು.
ಈ ಸಂಸ್ಥೆಯು ಬಿಎಸ್ಸಿ ಕೃಷಿ ವಿಜ್ಞಾನ ಎಂಬ 4 ವರ್ಷಗಳ ಕೋರ್ಸನ್ನು ಪ್ರಾರಂಭಿಸಿದ್ದು, 7 ವರ್ಷಗಳಿಂದ ಸುತ್ತಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳಲ್ಲದೇ ಹೊರರಾಜ್ಯದ ವಿದ್ಯಾರ್ಥಿಗಳಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಈ ಸಂಸ್ಥೆಯಿಂದ ಈಗಾಗಲೇ 3 ವರ್ಷದ ವಿದ್ಯಾರ್ಥಿಗಳ ತಂಡ ತೇರ್ಗಡೆಯಾಗಿ ಹೊರ ನಡೆದಿದ್ದು, ಅವರು ಉನ್ನತ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸ್ಥಳೀಯ ಕೃಷಿ ಭಾಂದವರೊಂದಿಗೆ ಸಮಾಲೋಚನೆ ನಡೆಸಿ, ಕೃಷಿ ವಿಷಯಗಳಲ್ಲಿ ತಾಂತ್ರಿಕತೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಮಾಹಿತಿ ನೀಡುತ್ತಿದ್ದು, ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದರು.
ಗೋಷ್ಠಿಯಲ್ಲಿ ಸಂಸ್ಥೆಯ ಪ್ರೊ.ಗುಬ್ಬಯ್ಯ, ಪ್ರೊ.ಪ್ರತಾಪ್ ಉಪಸ್ಥಿತರಿದ್ದರು.