ರೈತಸಂಘದ ಸಂಸ್ಥಾಪಕರಲ್ಲಿ ಒಬ್ಬರಾದ ಎನ್.ಡಿ.ಸುಂದರೇಶ್ ಅವರ ಜನ್ಮದಿನವನ್ನು ಹೋರಾಟದ ದಿನವನ್ನಾಗಿ ಡಿ.21ರಂದು ಆಚರಣೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘ (ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟದ ಮೂಲಕ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು, ಜಿಲ್ಲೆಯಲ್ಲಿ ಮುಖ್ಯ ಬೆಳೆಗಳಾದ ಕಬ್ಬು, ಭತ್ತ, ರಾಗಿ, ಹಿಪ್ಪುನೇರಳೆ ಮತ್ತು ಹೈನುಗಾರಿಕೆ ಯೋಗ್ಯವಾದ ಬೆಲೆ ನಿಗದಿ ಮಾಡಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಭತ್ತದ ಕಟಾವು ಶುರುವಾಗಿದ್ದು, ಖರೀದಿ ಕೇಂದ್ರವನ್ನು ತೆರೆಯದೇ ದಲ್ಲಾಳಿಗಳಿಗೆ ಅನುಕೂಲವಾಗುವ ರೀತಿ ಸರ್ಕಾರ ನಡೆದುಕೊಳ್ಳುತ್ತಿದೆ. ರೈತರಿಗೆ ಶೀಘ್ರವಾಗಿ ಖರೀದಿ ಕೇಂದ್ರವನ್ನು ತೆರೆದು ಯೋಗ್ಯವಾದ ಬೆಲೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಮಂಡ್ಯ ಜಿಲ್ಲೆಯಾದ್ಯಂತ ಸಕ್ಕರೆ ಕಾರ್ಖಾನೆಗಳು ಶುರುವಾಗಿದ್ದು, ಬೆಲೆ ನಿಗಧಿಪಡಿಸುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ಈಗಾಗಲೇ ರಸಗೊಬ್ಬರದ ಬೆಲೆಗಳು ಗಗನಕ್ಕೇರಿರುವುದರಿಂದ ರೈತರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸರ್ಕಾರವು ಖಾಸಗೀ, ಕಾರ್ಖಾನೆಗಳ ಮಾಲೀಕರ ಹಿಡಿತದಲ್ಲಿ ಸಿಲುಕಿ ರೈತರಿಗೆ ಬೆಲೆ ನಿಗದಿ ಮಾಡಲು ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ, ಈಗಾಗಲೇ ಕಾರ್ಖಾನೆಗಳು ಶುರುವಾಗಿ ಕಬ್ಬು ನುರಿಸುತ್ತಿದ್ದು, 6 ರಿಂದ 7 ತಿಂಗಳು ಕಳೆದರೂ ಬೆಲೆ ನಿಗದಿ ಮಾಡದಿರುವುದು ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ. ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಪ್ರಸ್ತಾವವನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ರೈತಮುಖಂಡರಾದ ಬೋರಾಪುರ ಶಂಕರಣ್ಣ, ಪ್ರಭುಲಿಂಗ, ಬೋರಲಿಂಗೇಗೌಡ ಉಪಸ್ಥಿತರಿದ್ದರು.