ರಾಜ್ಯದ 9 ನಕಲಿ ರಸಗೊಬ್ಬರ ಪ್ರಕರಣಗಳನ್ನು ಸಿಒಡಿ ತನಿಖೆಗೆ ವಹಿಸಲಾಗಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಮಧು ಜಿ. ಮಾದೇಗೌಡ ರವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು
ನಕಲಿ ರಸಗೊಬ್ಬರ ಮಾರಾಟ ಮಾಡತ್ತಿದ್ದ ವ್ಯಕ್ತಿಗಳನ್ನು ಗುರುತಿಸಿ ಪೊಲೀಸ್ ಠಾಣೆಗಳಲ್ಲಿ ಎಫ್.ಐ.ಆರ್. ದಾಖಲಿಸಲಾಗಿದೆ. ಕೆಲವು ಪ್ರಕರಣಗಳು ಅಂತರ ರಾಜ್ಯ ವ್ಯಾಪ್ತಿಗೆ ಒಳಪಡುವುದರಿಂದ ಹಾಗೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವ ಅವಶ್ಯಕತೆ ಇದ್ದುದರಿಂದ ಸಿ.ಒ.ಡಿ ಗೆ ವಹಿಸಲಾಗಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು.
ನಕಲಿ ರಸಗೊಬ್ಬರ ಉತ್ಪಾದನೆ, ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡು ಬಂದ ಮೇಲೆ ಕೂಡಲೇ ಸದರಿ ರಸಗೊಬ್ಬರವನ್ನು ಜಪ್ತು ಮಾಡಿ ತಪ್ಪಿತಸ್ಥರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸಿ, ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಳಪೆ ರಸಗೊಬ್ಬರ ಮಾದರಿಗಳಿಗೆ ಸಂಬಂಧಿಸಿದಂತೆ ರಸಗೊಬ್ಬರ (ನಿಯಂತ್ರಣ) ಆದೇಶ, 1985 ಕ್ಲಾಸ್ 19(b)ರ ಉಲ್ಲಂಘನೆ ಸಂಬಂಧ ರಸಗೊಬ್ಬರ ಪರಿವೀಕ್ಷಕರು ಸಂಬಂಧಪಟ್ಟ ಮಾರಾಟಗಾರರು/ ಸರಬರಾಜುದಾರರು/ ಉತ್ಪಾದಕರ ವಿರುದ್ದ ದಂಡ ಪ್ರಕ್ರಿಯೆ ಸಂಹಿತೆ, 1973ರ ಕಲಂ 200ರಡಿ ಆ ವ್ಯಾಪ್ತಿಯ ನ್ಯಾಯಾಲಯದಲ್ಲಿ ನಿಯಮಾನುಸಾರ ಮೊಕದ್ದಮೆ ಹೂಡಿ ಕ್ರಮವಹಿಸುತ್ತಿದ್ದಾರೆ ಎಂದು ಎನ್.ಚಲುವರಾಯಸ್ವಾಮಿ ಹೇಳಿದರು.
ರಾಜ್ಯದಲ್ಲಿ ಅಪರ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಜಾಗೃತಕೋಶ ಸೃಜಿಸಲಾಗಿದೆ ಮತ್ತು ಇವರ ಅಧೀನದಲ್ಲಿ ರಾಜ್ಯದ 4 ವಿಭಾಗಗಳಲ್ಲಿ (ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ) ಜಂಟಿ ಕೃಷಿ ನಿರ್ದೇಶಕರು (ಜಾಗೃತಕೋಶ) ಕಾರ್ಯನಿರ್ವಹಿಸುತ್ತಿದ್ದಾರೆ. ಜಾಗೃತ ಕೋಶದ ಅಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕೃಷಿ ನಿರ್ದೇಶಕರು (ಜಾರಿ ದಳ) ಮತ್ತು ಅಧಿಸೂಚಿಸಿರುವ ರಸಗೊಬ್ಬರ ಪರಿವೀಕ್ಷಕರು ದೂರುಗಳನ್ನು ಆಧರಿಸಿ, ಅನಿರೀಕ್ಷಿತವಾಗಿ ಅವರ ವ್ಯಾಪ್ತಿಯಲ್ಲಿನ ರಸಗೊಬ್ಬರ ಮಾರಾಟ ಮಾಡುತ್ತಿರುವ ಸಹಕಾರ ಸಂಘಗಳ ಮಳಿಗೆ, ಗೋಧಾಮು, ಮಾರಾಟಗಾರರ ಮಳಿಗೆ, ಗೋದಾಮು ಮತ್ತು ತಯಾರಿಕಾ ಘಟಕಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಪರಿಶೀಲನೆಯನ್ನು ಕೈಗೊಂಡು, ನಕಲಿ,ಕಳಪೆ ರಸಗೊಬ್ಬರ (ನಿಯಂತ್ರಣ) ಆದೇಶ, 1985ರನ್ವಯ ಕ್ರಮ ಜರುಗಿಸುತ್ತಿದ್ದಾರೆ ಎಂದರು.
ರಸಗೊಬ್ಬರಗಳು ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಸೇರ್ಪಡೆಯಾಗಿದ್ದು, ಜಿಲ್ಲೆಯ ಜಿಲ್ಲಾಧಿಕಾರಿಗಳು ಸದರಿ ಪರಿಕರದ ಉಸ್ತುವಾರಿ ಸಮಿತಿಯ ಅಧ್ಯಕ್ಷರಾಗಿದ್ದು, ಪ್ರತಿ ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆ ಮತ್ತು ಗುಣಮಟ್ಟದ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ಕೃಷಿ ಸಚಿವರು ಉತ್ತರಿಸಿದರು.