ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದ್ದು, ವರಿಷ್ಠರು ಯಾರಿಗೆ ಬಿ.ಫಾರಂ ಕೊಡುತ್ತಾರೋ ಅವರ ಪರ ಚುನಾವಣೆಯಲ್ಲಿ ಒಗ್ಗಟ್ಟಾಗಿ ದುಡಿದು ಆಯ್ಕೆ ಮಾಡಿ ಎಂದು ಮಾಜಿ ಶಾಸಕ ಎಚ್.ಬಿ.ರಾಮು ತಿಳಿಸಿದರು.
ಮಂಡ್ಯ ತಾಲ್ಲೂಕಿನ ಶ್ರೀನಿವಾಸಪುರದ ಅಮರಾವತಿ ಹೋಟೆಲ್ ಸಭಾಂಗಣದಲ್ಲಿ ಅಮರಾವತಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಮುಖಂಡರು ಹಾಗೂ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು ಹೆಚ್ಚಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ದುಡಿದು ಅಭ್ಯರ್ಥಿ ಗೆಲ್ಲಿಸಲು ಮುಂದಾಗಿ ಎಂದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಮರಾವತಿ ಚಂದ್ರಶೇಖರ್ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಜ.27 ರಂದು ”ಪ್ರಜಾಧ್ವನಿ” ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ನಾವೆಲ್ಲಾ ಒಂದಾಗಿ ಒಂದು ಲಕ್ಷ ಜನರನ್ನು ಸೇರಿಸುವ ಮೂಲಕ ನಮ್ಮ ಪಕ್ಷದ ಶಕ್ತಿಯನ್ನು ಪ್ರದರ್ಶನ ಮಾಡಬೇಕು. ನನಗೆ ಟಿಕೆಟ್ ಸಿಗುತ್ತೆ, ಇವರಿಗೆ ಟಿಕೆಟ್ ಎಂದೆಲ್ಲಾ ನಾವು ಮಾತನಾಡುವುದು ಬೇಡ. ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೋ ಅವರ ಪರ ಕೆಲಸ ಮಾಡೋಣ ಎಂದರು.
ಜ.22ರಂದು ಹುಲಿವಾನ ಗ್ರಾಮದ ಸಮುದಾಯ ಭವನದಲ್ಲಿ ಎಲ್ಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು, ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಅಂದು ಜ.27ರಂದು ಜಿಲ್ಲೆಗೆ ಆಗಮಿಸಲಿರುವ ಕಾಂಗ್ರೆಸ್ ”ಪ್ರಜಾಧ್ವನಿ” ಯಾತ್ರೆ ಕುರಿತು ಅಗತ್ಯ ಸಿದ್ದತೆ ಕುರಿತು ಚರ್ಚಿಸಲಾಗುವುದು. ಅ ಸಭೆಗೆ ಮಂಡ್ಯ ವಿಧಾನಸಭಾ ಕ್ಷೇತ್ರದ 16 ಟಿಕೆಟ್ ಆಕಾಂಕ್ಷಿತರನ್ನು ಆಹ್ವಾನಿಸಲಾಗುವುದು ಎಂದರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಾಜಿ, ಪ್ರಶಾಂತ್ ಬಾಬು, ಚಿಕ್ಕಬಳ್ಳಿ ಕೃಷ್ಣ, ಉಮೇಶ್ ಸೇರಿದಂತೆ ಮೊದಲಾದವರಿದ್ದರು.