ದೇಶಿ ಕ್ರೀಡೆಯನ್ನು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಆಯೋಜನೆ ಮಾಡುವುದರ ಮೂಲಕ ಕಬಡ್ಡಿಯಂತಹ ದೇಶಿ ಕ್ರೀಡೆಯನ್ನು ಉಳಿಸಿ ಬೆಳೆಸಲು ಯುವಜನತೆ ಮುಂದಾಗಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಟೋಲ್ಗೆಟ್ ಸಮೀಪ ಪೇಟೆ ಒಕ್ಕಲಗೆರಿ ಯುವಕರು ಮಳವಳ್ಳಿ ಇವರ ಸಂಯುಕ್ತ
ಆಶ್ರಯದಲ್ಲಿ ದಕ್ಷಿಣ ಕರ್ನಾಟಕ ವಿಭಾಗ ಮಟ್ಟದ ಪ್ರಥಮ ವರ್ಷದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲುವು ಪಡೆಯುವುದಕ್ಕಿಂತ ಮೊದಲು ಭಾಗವಹಿಸುವಿಕೆ ಪ್ರಮುಖವಾಗಿದ್ದು, ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಿ ಕ್ರೀಡೆಯನ್ನು ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.
ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರು ಸುರಕ್ಷಿತ ಮತ್ತು ಸುಂದರ ವಾತಾವರಣದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಇಂಥ ಸುಂದರ, ಸುಸಜ್ಜಿತ ನಗರ ನಿರ್ಮಾಣವಾಗಲು ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಟಿಯೇ ಕಾರಣವಾಗಿದ್ದು, ಅಂತಹ ಮಹಾನ್ನಾಯಕರ ಹೆಸರಿನಲ್ಲಿ ಕ್ರೀಡೆಯನ್ನು ಆಯೋಜಿಸಿರುವುದು ಹೆಮ್ಮಯ ವಿಷಯವಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಪೇಟೆ ಒಕ್ಕಲಗೆರಿ ಯುವಕರು ದೇಶಿ ಕ್ರೀಡೆ ಕಬ್ಬಡಿ ಪಂದ್ಯಾವಳಿ ಆಯೋಜಿಸಿರುವುದು ಸಂತೋಷದ ವಿಷಯವಾಗಿದೆ, ಭಾರತ ದೇಶದಲ್ಲಿ ಕಬಡ್ಡಿ ಕ್ರೀಡೆಗೆ ತಮ್ಮದೇ ಆದ ಇತಿಹಾಸ ಗೌರವವನ್ನು ಹೊಂದಿದ್ದು, ಯುವಕರು ಕಬ್ವಡಿ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ, ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ತೇಜನ ಪ್ರೋತ್ಸಾಹ ಪ್ರತಿಯೊಬ್ಬರು ನೀಡಬೇಕಾಗಿದೆ ಎಂದರು.
ಚಿತ್ರನಟ ಗಿಲ್ಲಿನಟ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ, ನಟನಾಗಿ ತಮ್ಮ ಊರಿಗೆ ಬಂದು ಅಭಿನಂದನೆಯನ್ನು ಸ್ವೀಕರಿಸುತ್ತಿರುವುದು ಖುಷಿ ತಂದಿದೆ. ಗ್ರಾಮೀಣ ಕ್ರೀಡೆಗಳು ಹೆಚ್ಚಾಗಿ ನಡೆಯಬೇಕು, ನೀವು ಮಾಡುವ ಕಾರ್ಯಕ್ರಮಕ್ಕೆ ತಾನು ಕೂಡ ಪ್ರೋತ್ಸಾಹಕನಾಗಿ ಇರುತ್ತೇನೆಂದು ಹೇಳಿದರು. ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹಾಗೂ ಪಿ.ಎಂ ನರೇಂದ್ರಸ್ವಾಮಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮುಖಂಡರಾದ ಪುಟ್ಟಸ್ವಾಮಿ ದೇವರಾಜು ನಾಗೇಶ್, ದೀಪು ಶಿವಕುಮಾರ್, ಜಗದೀಶ್, ವಿಶ್ವಾಸ್,
ಕೃಷ್ಣೇಗೌಡ, ಕೃಷ್ಣಮೂರ್ತಿ, ಬಸವರಾಜು, ಮಹದೇವು, ಬಸವರಾಜು, ಮಹೇಶ್, ಸುಂದರ್ರಾಜು
ಸೇರಿದಂತೆ ಇತರರು ಇದ್ದರು.