ವಿದ್ಯಾರ್ಥಿಗಳು ಶಾಲಾ ದಿಸೆಯಲ್ಲಿಯೇ ಕ್ರೀಡಾ ಮನೋಭಾವ ಬೆಳೆಸಿ ಕೊಂಡು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಶಾಸಕ ಎಂ ಶ್ರೀನಿವಾಸ್ ಸಲಹೆ ನೀಡಿದರು.
ಮಂಡ್ಯ ನಗರದ ಕರ್ನಾಟಕ ಪಬ್ಲಿಕ್ ಶಾಲೆ(ಅರ್ಕೇಶ್ವರ)ಯಲ್ಲಿ 1ನೇ ವೃತ್ತದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಾಲಾ ದಿಸೆಯಲ್ಲಿಯೇ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಲು ದೈಹಿಕ ಶಿಕ್ಷಕರ ಶ್ರಮ ಹೆಚ್ಚು ಇರಬೇಕು. ಆ ಮೂಲಕ ಕ್ರೀಡಾ ಸ್ಪರ್ಧೆಗಳಿಗೆ ನೆರವಾಗಬೇಕು. ಕ್ರೀಡೆ ಎಂಬುದು ಒಂದು ಆಟವಷ್ಟೇ ಅಲ್ಲ ಅದು ಶಿಸ್ತಿನಿಂದ ಕೂಡಿರಬೇಕು ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಸುಮಾರು ₹14 ಕೋಟಿ ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ ಕ್ರೀಡಾ ಸಚಿವರಾದ ಕೆ.ಸಿ.ನಾರಾಯಣಗೌಡ ಕ್ರೀಡೆಗೆ ಹೆಚ್ಚು ಒತ್ತು ನೀಡಿದ್ದಾರೆ. ಸರ್ಎಂ.ವಿ. ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಲು ಶ್ರಮವಹಿಸಿ, ಕ್ರೀಡಾ ಸ್ಪರ್ಧಿಗಳಿಗೆ ನೆರವಾಗಿದ್ದಾರೆ ಎಂದರು.
ಬೂದನೂರು ಗ್ರಾಮದ ಬಳಿ ಗೋಮಾಳ ಜಾಗವನ್ನು ಗುರುತಿಸಿ ಕ್ರೀಡಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ, ಎಲ್ಲ ಕ್ರೀಡೆಗೂ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಸಚಿವರು ನೆರವಾಗುತ್ತಿರುವುದು ಸಂತಸ ತಂದಿದೆ ಎಂದರು.
ಕ್ರೀಡೆಯಲ್ಲಿ ಭಾಗವಹಿಸುವುದಷ್ಟೇ ಮುಖ್ಯವಾಗಬೇಕು. ಗೆಲುವು ಸೋಲುಗಳನ್ನು ಸಮಾನವಾಗಿ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ.ಚಂದ್ರಕಾಂತ ಮಾತನಾಡಿ, ಕ್ರೀಡಾ ಕೂಟ, ಒಲಂಪಿಕ್ಸ್ನಲ್ಲಿ ಇರುವ ಶಿಸ್ತುಗಳನ್ನು ನಮ್ಮಲ್ಲಿಯೂ ಅಳವಡಿಸಿ ಕೊಳ್ಳಬೇಕು. ಕೇವಲ ಶಾಲೆಯಲ್ಲಷ್ಟೇ ಅಲ್ಲ,ಮನೆಯಲ್ಲಿಯೂ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ನಾಗೇಶ್, ವಿದ್ಯಾ, ಮೀನಾಕ್ಷಿ ಪುಟ್ಟಸ್ವಾಮಿ, ಪ್ರಾಂಶುಪಾಲ ಹನುಮಂತಯ್ಯ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಂ.ಕುಮಾರಸ್ವಾಮಿ, ಹಿರಿಯ ಮುಖ್ಯ ಶಿಕ್ಷಕಿ ಕೆ.ಪಾರ್ವತಮ್ಮ, ಉಪ ಪ್ರಾಂಶುಪಾಲ ಲೋಕೇಶ್, ಮುಖಂಡರಾದ ಎಚ್.ಎನ್. ಯೋಗೇಶ್, ಎಂ.ಆರ್.ಮಂಜು, ಬಿ.ಎಸ್.ಅನುಪಮಾ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.