Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಿ.ಸಿ.ತಮ್ಮಣ್ಣ ಅಭಿನಂದನಾ ಗ್ರಂಥ ತರಲು ನಿರ್ಧಾರ

ಶಾಸಕ ಹಾಗೂ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರ ಬಗ್ಗೆ ಅಭಿನಂದನಾ ಗ್ರಂಥ ಹೊರತರಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2023ರ ಏಪ್ರಿಲ್ 15ಕ್ಕೆ ಡಿ.ಸಿ. ತಮ್ಮಣ್ಣ ಅವರಿಗೆ 80 ವರ್ಷ ತುಂಬಲಿರುವ ಹಿನ್ನಲೆಯಲ್ಲಿ ಅವರ ಕುರಿತಾದ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಹಿರಿಯ ಸಾಹಿತಿ ಡಾ.ರಾಗೌ ಅವರನ್ನು ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕರಾಗಿ ಆಯ್ಕೆ ಮಾಡಲಾಗಿದೆ. ಸುಮಾರು 500 ಪುಟಗಳಲ್ಲಿ ಅಭಿನಂದನಾ ಗ್ರಂಥವನ್ನು ಹೊರತರಲು ನಿರ್ಧರಿಸಲಾಗಿದೆ. ತಮ್ಮಣ್ಣ ಅವರ ಒಡನಾಡಿಗಳು, ಹಿತೈಷಿಗಳು, ಸ್ನೇಹಿತರು, ಸಂಬಂಧಿಕರು, ಅಭಿಮಾನಿಗಳು ಸೇರಿದಂತೆ ತಮ್ಮಣ್ಣ ಅವರನ್ನು ಹತ್ತಿರದಿಂದ ತಿಳಿದವರಿಂದ ಲೇಖನಗಳನ್ನು ಅಭಿನಂದನಾ ಗ್ರಂಥಕ್ಕಾಗಿ ಪಡೆದುಕೊಳ್ಳಲಾಗುವುದು ಎಂದರು.

ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಡಿ.ಸಿ.ತಮ್ಮಣ್ಣನವರು ನಿವೃತ್ತಿ ಬಳಿಕ ರಾಜಕೀಯ ರಂಗ ಪ್ರವೇಶಿಸಿ ನಾಲ್ಕು ಬಾರಿ ಶಾಸಕರಾಗಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಸಾರಿಗೆ ಸಚಿವರಾಗಿ ಕೆಲಸ ಮಾಡಿದ್ದಾರೆ. ಕೃಷಿ, ಕೈಗಾರಿಕೆ, ಶಿಕ್ಷಣ ಹಾಗೂ ನೀರಾವರಿ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿರುವ ಅವರ ಸಾಧನೆಗಳ ಬಗ್ಗೆ ಗ್ರಂಥದಲ್ಲಿ ತಿಳಿಸಲಾಗುವುದು ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಮಾತನಾಡಿ,
ಶಾಸಕ, ಸಚಿವರಾಗಿ ಶಾಸನಸಭೆಗಳಲ್ಲಿ ತಮ್ಮಣ್ಣ ಅವರಾಡಿರುವ ಮಾತುಗಳು, ಮಾಡಿರುವ ಚರ್ಚೆಗಳು, ಅವರು ಮಾಡಿರುವ ಸಾಧನೆಗಳನ್ನು ಅಭಿನಂದನಾ ಗ್ರಂಥದಲ್ಲಿ ದಾಖಲಿಸಲಾಗುವುದು ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರ ನೇತೃತ್ವದಲ್ಲಿ ಡಿ.ಸಿ.ತಮ್ಮಣ್ಣ ಅಭಿನಂದನಾ ಸಮಿತಿ ರಚಿಸಲಾಗುವುದು. ತಮ್ಮಣ್ಣ ಅವರ ಹೆಸರಿನಲ್ಲಿ ಕರ್ನಾಟಕ ಸಂಘದಲ್ಲಿ ದತ್ತಿನಿಧಿ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.

ಗೋಷ್ಟಿಯಲ್ಲಿ ಅಭಿನಂದನಾ ಗ್ರಂಥದ ಸಂಪಾದಕ ಡಾ.ರಾಗೌ, ಮದ್ದೂರಿನ ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಪೂರ್ವಚಂದು, ಕರ್ನಾಟಕ ಜಾನಪದ ಪರಿಷತ್ತಿನ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಿ.ಸ್ವಾಮಿ, ಶಿವಕುಮಾರ್, ಪ್ರಕಾಶ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!