ಪೆನ್ ಡ್ರೈವ್ ಪ್ರಕರಣದಲ್ಲಿ ರಾಜ್ಯಮಟ್ಟದಲ್ಲಿ ಬಿಜೆಪಿಯ ಅತ್ಯುತ್ತಮ ಸ್ಥಾನದಲ್ಲಿ ಕುಳಿತಿರುವ ನಾಯಕ ಹಾಗೂ ಹಾಸನದ ಮಾಜಿ ಶಾಸಕನ ಕೈವಾಡ ಇದೆ ಎಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.
ಪೆನ್ ಡ್ರೈವ್ ಹಂಚಿಕೆಯನ್ನು ಡಿ.ಕೆ. ಶಿವಕುಮಾರ್ ಮಾಡಿಸಿದ್ದಾರೆ ಎಂಬ ಬಗ್ಗೆ ದಾಖಲೆ ಇದ್ದರೆ ಕೊಡಲಿ.
ಡಿ.ಕೆ. ಶಿವಕುಮಾರ್ ಅವರ ಹತ್ತಿರ ದಿನ ಸಾವಿರಾರು ಜನ ಬರ್ತಾರೆ. ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ದೇವರಾಜೇಗೌಡ ಬಿಜೆಪಿಯ ಮಾಜಿ ಶಾಸಕ ಇವರೇ ಯಾಕೆ ಷಡ್ಯಂತ್ರ ಹೂಡಿರಬಾರದು?
ದೇವರಾಜೇಗೌಡ, ಶಿವರಾಮೇಗೌಡ ಇಬ್ಬರು ಇರಬಹುದಲ್ವ. ಶಿವರಾಮೇಗೌಡರನ್ನ ಕಳುಹಿಸಿ ಯಾಕೆ ಷಡ್ಯಂತ್ರ ಹೂಡಿರಬಾರದು ಎಂದರು.
ದೇವರಾಜೇಗೌಡ ಬಿಜೆಪಿಯ ಪರಾಭವ ಅಭ್ಯರ್ಥಿ, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಬೇಕು ಅಂತ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಸಾರ ಮಾಡಬಾರದೆಂದು ತಡೆಯಾಜ್ಞೆ ತಂದಾಗ ಇದೇ ದೇವರಾಜೇಗೌಡ ಹಾಸನದಲ್ಲಿ ಏನು ಹೇಳಿದ್ದರು ಎಂಬುದು ಗೊತ್ತಿದೆ. ನಿನ್ನ ತಡೆಯಾಜ್ಞೆ ತೆರವು ಆದ ನಂತರ ಎಲ್ಲವನ್ನೂ ಬಿಡ್ತಿನಿ ಅಂತ ಹೇಳಿದ್ದರು. ಒಂದು ತಿಂಗಳಿಂದ ದೇವರಾಜೇಗೌಡರ ಹೇಳಿಕೆಗಳನ್ನ ನೋಡಿದರೆ ಅವರೇ ಈಗ ಡಿ.ಕೆ.ಶಿವಕುಮಾರ್ ವಿರುದ್ಧ ಸುಳ್ಳು ಹೇಳುತ್ತಿದ್ದಾರೆಂಬುದು ಗೊತ್ತಾಗುತ್ತದೆ ಎಂದರು.
ಪೆನ್ ಡ್ರೈವ್ ಕೇಸ್ ನಲ್ಲಿ ಹಾಸನದ ಮಾಜಿ ಶಾಸಕನ ಕೈವಾಡ ಇದೆ. ಅವರೇ ಕೋಟ್ಯಾಂತರ ರೂ.ಹೂಡಿಕೆ ಮಾಡಿ ಪೆನ್ ಡ್ರೈ ಹಂಚಿದ್ದಾರೆ. ರೇವಣ್ಣ ಕುಟುಂಬದ ಜೊತೆ ರಾಜಕೀಯ ವಿರೋಧ ಇರುವ ಅವರೇ ಷಡ್ಯಂತ್ರ ಮಾಡಿರೋದು. ಇವಾಗ ಡಿ.ಕೆ. ಶಿವಕುಮಾರ್ ಮೇಲೆ ಹೇಳುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ಬಿಜೆಪಿಯ ಅತ್ಯುತ್ತಮ ಸ್ಥಾನದಲ್ಲಿ ಕುಳಿತಿರುವರು. ಹಾಸನದ ಮಾಜಿ ಶಾಸಕರು ಶಾಮೀಲಾಗಿ ಪೆನ್ ಡ್ರೈ ಹಂಚಿದ್ದಾರೆ. ಮೊಸರು ತಿಂದು ಮೇಕೆ ಬಾಯಿಗೆ ಹೊರೆಸಿದ ಹಾಗೆ ಮಾಡ್ತಿದ್ದಾರೆ. ದೇವರಾಜೇಗೌಡನ ಪೋನ್ ಕಾಲ್ ಟ್ರ್ಯಾಪ್ ಮಾಡಿದ್ರೆ ಎಲ್ಲ ಗೊತ್ತಾಗುತ್ತೆ ಎಂದು ತಿಳಿಸಿದರು.
ಪೆನ್ ಡ್ರೈವ್ ಪ್ರಕರಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಜೆಡಿಎಸ್ ಮಟ್ಟ ಹಾಕಲು ಬಿಜೆಪಿ ತಂತ್ರ ಇದಾಗಿದೆ. ಪವರ್ ಪುಲ್ ಮನುಷ್ಯರೆಲ್ಲ ಸೇರಿ ಡಿ.ಕೆ.ಶಿವಕುಮಾರ್ ತಲೆಗೆ ಕಟ್ಟಲು ನೋಡ್ತಿದ್ದಾರೆ. ಎಸ್ಐಟಿ ಅಧಿಕಾರಿಗಳು ದಕ್ಷರಿದ್ದಾರೆ ಎಲ್ಲವನ್ನೂ ಹೊರ ತರ್ತಾರೆ. ಪೆನ್ ಡ್ರೈವ್ ಬಿಡುಗಡೆ ಮಾಡಿದ್ದೇ ದೇವರಾಜೇಗೌಡ. ಅದನ್ನು ಮಾರ್ಕೆಟ್ ಮಾಡಿದ್ದು ಬಿಜೆಪಿಯವರು. ದೇವೇಗೌಡ್ರು ಕುಟುಂಬ, ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಹೀಗೆ ಮಾಡ್ತಿದೆ. ಜೆಡಿಎಸ್ ಮುಗಿಸಿ ಬಿಜೆಪಿ ಭದ್ರಕೋಟೆ ನಿರ್ಮಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.