ಮೊದಲು ನೀರು ನಿಲ್ಲಿಸಿ, ಪರಿಶೀಲಿಸಿದ ನಂತರ ಆದೇಶ ಮಾಡಿ, ಕಾವೇರಿ ನದಿ ನೀರು ಪ್ರಾಧಿಕಾರ ಯಾವ ಆಧಾರದ ಮೇಲೆ, ಯಾವ ಅಂಕಿ ಅಂಶ ಇಟ್ಕೊಂದು ಆದೇಶ ಮಾಡಿದೆ ಗೊತ್ತಾಗ್ತಿಲ್ಲ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಬೆಳೆ ಬೆಳೆಯಲು ನೀರು ಕೇಳ್ತಿದೆ. ನಾವು ಕುಡಿಯಲು ನೀರು ಕೇಳ್ತಿದ್ದೇವೆ, ಕೃಷಿಗಲ್ಲ. ಇದು CWMAಗೆ ಯಾಕೆ ಅರ್ಥ ಆಗ್ತಿಲ್ಲ? ಆದೇಶ ಪಾಲಿಸಿದ್ರೆ ನೀರು ಖಾಲಿಯಾಗಿ ಬಿಡುತ್ತದೆ. ಆಗ ಅರ್ಧ ಬೆಂಗಳೂರಿಗೂ ನೀರು ಸಾಲಲ್ಲ.
ನೀರು ಎಲ್ಲಿಂದ ಬರುತ್ತದೆ, ಉತ್ಪತ್ತಿ ಮಾಡೋದಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ನೀರು ಬಿಡದಂತೆ ಸರ್ಕಾರ ಧೃಡ ನಿರ್ಧಾರ ಮಾಡಬೇಕು. ಎಂದಿಗಿಂತ 700-800 ಕ್ಯೂಸೆಕ್ ಹೆಚ್ಚು ನೀರು ಬಿಡಲಾಗಿದೆ. ಆದರೆ ಆ ನೀರನ್ನು ಬಿಡಬಾರದು ಎಂಬುದು ನಮ್ಮ ನಿಲುವು. ತಜ್ಞರ ತಂಡ ಇಲ್ಲಿಗೆ ಬಂದು ಪರಿಸ್ಥಿತಿ ಅವಲೋಕಿಸಿ ನಂತರ ಆದೇಶ ಮಾಡಲಿ. ದೆಹಲಿಯಲ್ಲಿ ಕುಳಿತು ಆದೇಶ ಮಾಡೋದು ನ್ಯಾಯ ಸಮ್ಮತವಲ್ಲ ಎಂದು ಕಿಡಿಕಾರಿದರು.
ಸುಪ್ರೀಂ ಕೋರ್ಟ್ ಕೂಡ CWMA ಆದೇಶವನ್ನೇ ಎತ್ತಿ ಹಿಡಿಯುವ ಆತಂಕ ಇದೆ. ಹಾಗಾಗಿ ಸುಪ್ರೀಂಗೆ ಹೇಗೆ ಮನವರಿಕೆ ಮಾಡಿಕೊಡಬೇಕು ಎನ್ನುವ ಸಿದ್ದತೆಯಲ್ಲಿದ್ದೇವೆ. ಸೋಷಿಯಲ್ ಮತ್ತು ಎಕಾನಾಮಿಕ್ ಇಂಪ್ಯಾಕ್ಟ್ ಅಂಶ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದೇವೆ. ಸಿಎಂ, ಡಿಸಿಎಂ ಇಂದು ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ.
ದೆಹಲಿಗೆ ತೆರಳಿ ಸಂಬಂಧಪಟ್ಟ ಸಚಿವರಿಗೆ ಮನವರಿಕೆ ಮಾಡುವ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.