ಮೇಕೆದಾಟು ‘ನಮ್ಮ ನೀರು- ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ಹತ್ತಾರು ಕೋಟಿ ರೂ. ವ್ಯಯಿಸಿ, ನಡೆಸಿದ ಮೇಕೆದಾಟು ಹೋರಾಟಕ್ಕೆ ಯಾವ ಪ್ರಯೋಜನವಾಯಿತು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಕಿಡಿಕಾರಿದರು.
ಮಂಡ್ಯದಲ್ಲಿ ಜೆಡಿಎಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಕನ್ನಂಬಾಡಿ ನಿರ್ಮಿಸಲು ಮುಂದಾದಾಗಲೂ ಅಂದಿನ ಮದ್ರಾಸ್ ಸರ್ಕಾರ ಅಡ್ಡಿಪಡಿಸಿತ್ತು. ಆ ಕಿರುಕುಳ ಇಂದಿಗೂ ತಪ್ಪಿಲ್ಲ, ಅಧಿಕಾರಕ್ಕಾಗಿ ಮೇಕೆದಾಟು ಹೋರಾಟ ನಡೆಸಿದ, ಇಂದಿನ ಜನಪ್ರತಿನಿಧಿಗಳು ರಾಜ್ಯದ ಹಿತ ಮರೆತು ತಮಿಳುನಾಡಿನ ಓಲೈಕೆಗಾಗ ನೀರು ಹರಿಸುತ್ತಿರುವುದು ಸರಿಯಲ್ಲವೆಂದರು.
ಹೆಚ್.ಡಿ.ದೇವೇಗೌಡ ಹೋರಾಟದ ಫಲವಾಗಿ ಹೇಮಾವತಿ, ಹಾರಂಗಿ, ಕಬಿನಿ ಹಾಗೂ ಇಗ್ಗಲೂರು ಜಲಾಶಯಗಳು ನಿರ್ಮಾಣವಾಗಿವೆ. ಗೌಡರ ದೂರದೃಷ್ಠಿಯಿಂದ 14.71 ಟಿಎಂಸಿ ಹೆಚ್ಚುವರಿ ನೀರು ರಾಜ್ಯಕ್ಕೆ ಲಭ್ಯವಾಗಿದೆ. ತಮಿಳುನಾಡಿನ ಆಸೆಬುರುಕತನದಿಂದ 660 ಟಿಎಂಸಿ ನೀರು ಸಮುದ್ರದ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿಗಾಗಿ ಪಕ್ಷಾತೀತ ಹೋರಾಟ ಅನಿವಾರ್ಯವಾಗಿದೆ ಎಂದರು.