ಗ್ರಾಮೀಣ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಆರೋಗ್ಯ ಯೋಜನಾ ಕಾರ್ಡ್ ಮಾಡಿಸಿಕೊಂಡು ಅದು ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ತಿಳಿಸಿದರು.
ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಡ್ಯದ ಡಿಆರ್ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗೋಪಾಲಪುರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಉಚಿತವಾಗಿ ನಡೆದ ಉಚಿತವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆಯುಷ್ಮಾನ್ಭವ-೩.೦ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ವಿಶೇಷ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಈ ಅವಧಿಯಲ್ಲಿ ಇಲಾಖೆಯ ಅಧಿಕಾರಿಗಳು ಜನರ ಮನೆ ಬಾಗಿಲಿಗೆ ತೆರಳಿ ಎಬಿಆರ್ಕೆ ಬಗ್ಗೆ ಮಾಹಿತಿ ನೀಡಿ, ಕಾರ್ಡ್ ಮಾಡಿಸಲು ಪ್ರೇರೇಪಣೆ ನೀಡಲಾಗುತ್ತಿದೆ. ಪ್ರತಿ ತಿಂಗಳ ಮೊದಲ ಮಂಗಳವಾರಗಳಂದು ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರಗಳು, ೨೬೭ ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಎನ್ಸಿಡಿ ಕ್ಲಿನಿಕ್ ಕಾರ್ಯ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಜನರನ್ನು ಪರೀಕ್ಷೆ ಮಾಡಿ ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡಲಾಗುತ್ತದೆ ಎಂದು ಹೇಳಿದರು.
ಡಿಆರ್ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಎಂ.ಪ್ರಶಾಂತ್ ಮಾತನಾಡಿ, ಹೃದಯಾಘಾತ ಮತ್ತು ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ಬಹಳ ಮುಖ್ಯ. ಈ ಅವಧಿಯಲ್ಲಿಸಕಾಲದಲ್ಲಿ ತುರ್ತು ಚಿಕಿತ್ಸೆ ದೊರೆತರೆ ರೋಗಿ ಅಥವಾ ಗಾಯಾಳುವಿಗೆ ಬದುಕುವ ಅವಕಾಶ ಹೆಚ್ಚು ಸಿಗುತ್ತದೆ. ಯಾವುದೇ ರೋಗಗಳು ದಿಢೀರನೆ ಕಾಣಿಸಿಕೊಳ್ಳುವುದಿಲ್ಲ. ಆಗಾಗ್ಗೆ ಒಂದಷ್ಟು ಸೂಚನೆಗಳನ್ನು ನೀಡುತ್ತವೆ. ಅವುಗಳನ್ನು ಗಮನಿಸಿಕೊಂಡು ಜನರು ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಂಡು ತುರ್ತು ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ಶಿಬಿರದಲ್ಲಿ ನೂರಾರು ಮಂದಿಯ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಇಸಿಜಿ, ಬಿಪಿ(ರಕ್ತದೊತ್ತಡ), ಶುಗರ್(ಸಕ್ಕರೆ ಕಾಯಿಲೆ) ಪರೀಕ್ಷೆ, ಹೃದಯ ಸಂಬಂಧಿ ಕಾಯಿಲೆ ಇರುವವರು ಉಚಿತವಾಗಿ ಎಕೋ ಪರೀಕ್ಷೆ ಮಾಡಲಾಯಿತು. ಗ್ರಾ.ಪಂ. ಅಧ್ಯಕ್ಷೆ ಸವಿತಾ ಅಧ್ಯಕ್ಷತೆ ವಹಿಸಿದ್ದರು.
ಟಿಎಚ್ಒ ಡಾ.ಜವರೇಗೌಡ, ಮಕ್ಕಳ ತಜ್ಞ ಡಾ.ಶರತ್ಕೀರ್ತಿ, ಮೂತ್ರಪಿಂಡ ತಜ್ಞ ಡಾ.ವಿಜಯ್, ಫಿಜಿಷಿಯನ್ ಡಾ.ಹದೀಮ್ ಮೊಹಮ್ಮದ್, ಡಿಆರ್ಎಂ ಆಸ್ಪತ್ರೆಯ ಆಡಳಿತಾಧಿಕಾರಿ ಲಾವಣ್ಯ, ಪಿಆರ್ಒಗಳಾದ ಶಂಕರ್, ಹರೀಶ್, ಗೋಪಾಲಪುರ ಗ್ರಾ.ಪಂ. ಉಪಾಧ್ಯಕ್ಷ ಕೆ.ಆರ್.ಕೆಂಪಾಚಾರಿ, ಸದಸ್ಯರಾದ ಜಿ.ಎಸ್.ರವಿ, ಸುಧಾ, ಆರ್.ಕವಿತಾ, ಕೆ.ಎಲ್.ಪುಟ್ಟಮ್ಮ, ನಾಗರಾಜು, ಪಿಡಿಒ ಎಂ.ಕೆ.ಅನಿತಾ ರಾಜೇಶ್ವರಿ, ಕರ್ಯದರ್ಶಿ ಎಂ.ಎ.ಮಧುಪ್ರಸಾದ್, ಗ್ರಾಮದ ಮುಖಂಡ ಜಿ.ವಿ.ಶ್ರೀನಿವಾಸ್ ಇತರರು ಭಾಗವಹಿಸಿದ್ದರು.