ಕಾಂಗ್ರೆಸ್ ನಾಯಕ ಎನ್.ಚಲುವರಾಯಸ್ವಾಮಿ ಅವರಿಂದ ಮಂಡ್ಯ ಜಿಲ್ಲೆಗೆ ದ್ರೋಹವಾಗಿದೆ ಎಂದು ಹೇಳಿಕೆ ನೀಡಿರುವ ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಡಲೇ ಕ್ಷಮೆಯಾಚಿಸಬೇಕೆಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್ ಆಗ್ರಹಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲುವರಾಯಸ್ವಾಮಿ ಅವರು ಬಿಜೆಪಿಯವರ ಜೊತೆ ಶಾಮೀಲಾಗಿ 8000 ಕೋಟಿ ರೂ.ಗಳನ್ನು ತಡೆ ಹಿಡಿದಿದ್ದಾರೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾದ ವಿಚಾರವಾಗಿದೆ. ರವೀಂದ್ರ ಅವರು ಸುಳ್ಳು ಹೇಳುವ ಮೂಲಕ ಜಿಲ್ಲೆಯ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ, ಅವರು 50 ಸಾವಿರ ವೋಟ್ ಗಳ ಅಂತರದಲ್ಲಿ ಗೆದ್ದ ಭ್ರಮೆಯಲ್ಲಿದ್ಧಾರೆ, ಈ ಹಿಂದೆ 20 ವರ್ಷಗಳಿಂದ ಅಧಿಕಾರ ವಂಚಿತರಾಗಿದ್ದರು, ಆದರೆ ಜನರು ಒಂದು ಬಾರಿ ಅವಕಾಶ ನೀಡಿದ್ದಾರೆ, ಅದನ್ನು ಉಳಿಸಿಕೊಳ್ಳುವ ಬಗ್ಗೆ ಅವರು ಚಿಂತಿಸಲಿ ಎಂದರು.
ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಗೆದ್ದಿದ್ದರೂ 21 ತಿಂಗಳು ಜಿಲ್ಲಾ ಪಂಚಾಯಿತಿಯ ಬಾಗಿಲು ಬಂದ್ ಆಗಿತ್ತು, ಈ ಅವಧಿಯಲ್ಲಿ ಯಾವುದೇ ಅಭಿವೃದ್ಧಿಯ ಕೆಲಸಗಳು ಆಗಲಿಲ್ಲ, ಜಿಲ್ಲೆಯ ಏಳು ಜನ ಎಂಎಲ್ಎಗಳು ಮಂಡ್ಯಕ್ಕೆ ಎಷ್ಟು ಅನುದಾನ ತಂದಿದ್ದಾರೆ ಮೊದಲು ತಿಳಿಸಲಿ ಎಂದು ಆಗ್ರಹಿಸಿದರು.
ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಏನು ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷದೊಂದಿಗೆ ಬಹಿರಂಗ ಚರ್ಚೆಗೆ ಬರಲಿ. ನಾವು ಸಿದ್ದರಿದ್ದೇವೆ ಎಂದು ಆಹ್ವಾನ ನೀಡಿದ ಅವರು, ರವೀಂದ್ರ ಶ್ರೀಕಂಠಯ್ಯ ಅವರು ಜೆಡಿಎಸ್ ನಾಯಕರು ಒಲೈಸಿಕೊಳ್ಳಲು ಹೋಗಿ ಬೇಜಾವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇನ್ನು 3-4 ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಎಸ್ಸಿ, ಎಸ್ಟಿ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಕೃಷ್ಣ, ಮುಖಂಡರಾದ ಬಿ.ಟಿ.ಗುರುರಾಜ್, ನಹೀಂ, ಹೀನಾ ಉಪಸ್ಥಿತರಿದ್ದರು.