ಮಕ್ಕಳ ಜ್ಞಾನ ವಿಕಸನಗೊಳ್ಳಲು ಶಿಕ್ಷಣ ಒಂದು ಅತ್ಯುತ್ತಮ ವ್ಯವಸ್ಥೆಯಾಗಿದೆ, ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಹಣ ಸಂಪಾದನೆ ಮಾಡದಿದ್ದರೂ ಪರವಾಗಿಲ್ಲ. ಮಕ್ಕಳಿಗೆ ಗುಣ ಮಟ್ಟಸ ಶಿಕ್ಷಣ ಕೊಡಿಸಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಪ್ರಗತಿ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕೆ ಕಾಳೇಗೌಡ ಹೇಳಿದರು.
ಕೆ ಆರ್ ಪೇಟೆ ಪಟ್ಟಣದ ಪ್ರಗತಿ ಶಾಲೆಯಲ್ಲಿ ಇಂದು ನಡೆದ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಣ ಕೊಡಿಸುವುದು ಪೋಷಕರ ಜವಾಬ್ದಾರಿಯಾಗಿದೆ, ಪೋಷಕರು ತಮ್ಮ ಮಕ್ಕಳ ನಡವಳಿಕೆಯ ಬಗ್ಗೆ ಸದಾ ಗಮನಿಸುತ್ತಿರಬೇಕು, ಮಕ್ಕಳ ಮಾನಸಿಕ ಚಟುವಟಿಕೆಗಳು ಬದಲಾಗುತ್ತಿರುತ್ತದೆ, ಸದಾ ಜಾಗೃತಿ ವಹಿಸುವುದರಿಂದ ಮಕ್ಕಳು ಯಾವುದೇ ಕಾರಣದಿಂದ ತಪ್ಪು ದಾರಿಗೆ ಹೋಗದಂತೆ ನೋಡಿಕೊಳ್ಳಬಹುದು ಎಂದರು.
ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಸಾಮಾನ್ಯ ಜ್ಞಾನ ಆಂಗ್ಲ ಭಾಷೆಯ ಕಲಿಕೆ, ಕೌಶಲ್ಯ ತರಬೇತಿ, ಕರಾಟೆ, ಯೋಗಾಸನ, ಪ್ರಾಣಾಯಾಮ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ತರಬೇತಿಯನ್ನು ನೀಡಲಾಗುತ್ತಿದೆ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಪೋಷಕರಿಗೆ ಮನವಿ ಮಾಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಮೋನಿಕಾಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಎಚ್ ಆರ್ ಗೋಪಾಲಕೃಷ್ಣ, ಶಿಕ್ಷಕರಾದ ಲತಾ ಮತ್ತು ಎಂ ಲಕ್ಷ್ಮೀದೇವಿ ಭಾಗವಹಿಸಿದ್ದರು.