ಶಿಕ್ಷಣ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಕಲಿಸುತ್ತದೆ ಎಂದು ಪ್ರಾಂಶುಪಾಲ ಡಾ. ಎ.ಟಿ.ಶಿವರಾಮು ಅಭಿಪ್ರಾಯ ವ್ಯಕ್ತಪಡಿಸಿದರು.
ನಾಗಮಂಗಲ ತಾಲೂಕಿನ ಬಿ.ಜಿ .ನಗರದ ಬಿಜಿಎಸ್ ಶಿಕ್ಷಣ ಮಹಾವಿದ್ಯಾಲಯಕ್ಕೆ ವಿವಿಧ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಮೇಲುಸ್ತುವಾರಿ ಮತ್ತು ಮೌಲ್ಯಮಾಪನ ಸಮಿತಿಯು (NAAC) ಭೇಟಿ ನೀಡಿ, ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ತಪಾಸಣೆ ವೇಳೆ ಆಯೋಜಿಸಿದ್ದ ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷರಾಗಿ ಮಾತನಾಡಿದರು.
ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಸ್ವೀಕರಿಸುತ್ತಿರುವ ನೀವು ಆಧುನಿಕ ಕೌಶಲ್ಯಗಳಿಂದ ಬೋಧಿಸಿ ವೃತ್ತಿ ಸಾರ್ಥಕತೆಯನ್ನು ಸಾಕಾರಗೊಳಿಸಿ ಎಂದು ಕರೆ ನೀಡಿದರು.
ಸಮಿತಿಯ ಸದಸ್ಯರಾಗಿ ಆಗಮಿಸಿದ್ದ ಬೆಂಗಳೂರಿನ ಸಂಜಯಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಲತಾಕುಮಾರಿ ಮಾತನಾಡಿ, ಒಬ್ಬ ಶ್ರೇಷ್ಠ ಶಿಕ್ಷಕನ ಪ್ರಾಯೋಗಿಕ ಅನುಭವ, ವರ್ತನೆ ಮತ್ತು ಬೋಧನೆಯು ವಿದ್ಯಾರ್ಥಿಗಳ ಕನಸನ್ನು ಗುರಿಯೆಡೆಗೆ ತಲುಪಿಸುತ್ತದೆ. ಅಂತಹ ಜವಾಬ್ದಾರಿಯಿಂದ ಸಮಾಜವನ್ನು ಉದ್ದರಿಸುವ ಮಹತ್ತರವಾದ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕು ಎಂದರು.
ಡಾ. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಎ. ಹೆಚ್. ವಾಜಿಹ, ಮತ್ತು ಎಂ ಶೋಭಾ ಮಾತನಾಡಿದರು. ಈ ಸಮಯದಲ್ಲಿ 160 ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ತಪಾಸಣೆ ನಡೆಸಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ವಿ. ಪುಟ್ಟಸ್ವಾಮಿ, ಎ. ಎಚ್. ಗೋಪಾಲ್, ಸಿ.ಎಲ್. ಶಿವಣ್ಣ, ವಿ.ಲೋಕೇಶ್ ಕುಮಾರ್, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.