ಮಂಡ್ಯ ತಾಲ್ಲೂಕಿನ ಹೊಸ ಬೂದನೂರಿನ ನೊಂದ ವ್ಯಕ್ತಿ ಸುನಿಲ್ಕುಮಾರ್ ಎಂಬವರು ಇಬ್ಬರು ಕ್ರಿಕೆಟ್ ಬುಕ್ಕಿಗಳ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಕ್ರಿಕೆಟ್ ಬುಕ್ಕಿಗಳಾದ ಮಂಡ್ಯ ಹಳೇಬೂದನೂರಿನ ಎಚ್.ಎಸ್.ಮಧುಕುಮಾರ್ (ಗ್ರಾಪಂ ಸದಸ್ಯ) ಹಾಗೂ ಬಿ.ಪಿ.ಅಭಿಷೇಕ್ಗೌಡ ಇವರ ವಿರುದ್ಧ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಈ ಇಬ್ಬರು ನಡೆಸುತ್ತಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆಯಿಂದ ನನಗೆ ಎರಡು ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಕಳೆದ ಫೆ.12ರಂದು ನಾನು (ಸುನೀಲ್ ಕುಮಾರ್) ಮೈಸೂರಿನಲ್ಲಿ ವಿಷ ಸೇವಿಸಿದ್ದು, ಸ್ಥಳೀಯರು ಕೆ.ಆರ್.ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪಡೆಯುತ್ತಿದ್ದೆ. ಫೆ.15ರಂದು ಆಸ್ಪತ್ರೆಯಲ್ಲಿ ನನ್ನ ಆರೋಗ್ಯ ತುಂಬಾ ಕೆಟ್ಟಿತ್ತು. ಸಾಯುವ ಪರಿಸ್ಥಿತಿಯಲ್ಲಿದ್ದಾಗ ವೈದ್ಯರು ಮತ್ತು ಪೊಲೀಸರಿಗೆ ನಾನು ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಕ್ರಿಕೆಟ್ ಬುಕ್ಕಿಗಳಾದ ಎಚ್.ಎಸ್.ಮಧುಕುಮಾರ್ ಮತ್ತು ಕೆ.ಅಭಿಷೇಕ್ಗೌಡ ಹತ್ತಿರ ಒಂದು ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕಳೆದುಕೊಂಡಿರುತ್ತೇನೆಂದು ಮೌಖಿಕವಾಗಿ ಹೇಳಿಕೆ ನೀಡಿದ್ದೆ.
ನಂತರ ಚಿಕಿತ್ಸೆ ಪಡೆದು ನನ್ನ ಗ್ರಾಮ ಹೊಸ ಬೂದನೂರಿಗೆ ಹಿಂತಿರುಗಿದ್ದೆ. ಮನೆಯಲ್ಲಿದ್ದ ನನ್ನನ್ನು ಭೇಟಿ ಮಾಡಿ ಮಾತನಾಡಬೇಕೆಂದು ಕೆ.ಅಭಿಷೇಕ್ಗೌಡ ನನ್ನನ್ನು ಉಪಾಯವಾಗಿ ಮದ್ದೂರಿಗೆ ಕರೆದುಕೊಂಡು ಹೋಗಿದ್ದರು. ನಂತರ ಉಪಾಯದಿಂದ ಬೈಕಿನಲ್ಲಿ ಗೆಜ್ಜಲಗೆರೆ ಮಾರ್ಗವಾಗಿ ಕುದರಗುಂಡಿ ಕೆರೆಯ ಏರಿಯ ಮೇಲೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು. ಅಲ್ಲಿಗೆ ಕ್ರಿಕೆಟ್ ಬುಕ್ಕಿ ಮಧುಕುಮಾರ್ನನ್ನು ಕರೆಯಿಸಿದರು. ಅಲ್ಲಿಗೆ ಬಂದ ಮಧುಕುಮಾರ್ ನನ್ನ ಮೇಲೆ ಏಕಾಏಕಿ ಹಲ್ಲೇ ಮಾಡಿದ್ದಲ್ಲದೆ, ಕೊಲೆ ಮಾಡಲು ಪ್ರಯತ್ನಿಸಿದ್ದರು. ಅದೇ ವೇಳೆ ಬೈಕೊಂದರ ಶಬ್ಧ ಮತ್ತು ಯಾರೋ ಬರುತ್ತಿರುವುದನ್ನು ಗಮನಿಸಿ ಸುಮ್ಮನಾಗಿದ್ದರು. ನಂತರ ಬಾಯಿಗೆ ಬಂದ ಹಾಗೆ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ. ಇದೆಲ್ಲ ಮುಗಿದ ಮೇಲೆ ಮದ್ದೂರಿಗೆ ಅವರದೇ ಬೈಕಿನಲ್ಲಿ ಕರೆದುಕೊಂಡು ಬಂದು ಬಿಟ್ಟು, ಇನ್ನು ಈ ವಿಷಯದ ಬಗ್ಗೆ ನೀಡಿದ್ದೇ ಆದರೆ, ಹುಡುಕಿಸಿ ಕೊಲೆ ಮಾಡುವುದಾಗಿ ಮತ್ತು ಸುಪಾರಿ ನೀಡಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಮ್ಮ ಜಮೀನು ಮಾರಿದ 36 ಲಕ್ಷ ರೂ.ಗಳನ್ನು ಸಹ ಕ್ರಿಕೆಟ್ ಬೆಟ್ಟಿಂಗ್ನಲ್ಲೇ ಸೋತಿದ್ದೇನೆ. ಒಟ್ಟಾರೆ ನನಗೆ ಸುಮಾರು ಎರಡು ಕೋಟಿ ರೂ.ಗಳಿಗೂ ಅಧಿಕ ಹಣ ನಷ್ಟು ಉಂಟಾಗುವಂತೆ ಆಗುವಂತೆ ಮಾಡಿದ್ದಾರೆ. ನಿರಂತರವಾಗಿ ಇವರಿಂದ ತೊಂದರೆಗಳನ್ನು ಅನುಭವಿಸಿದ್ದು, ಈ ಕಷ್ಟ ತಾಳಲಾರದೆ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆನು. ಈಗ ಕೊಲೆ ಮಾಡಲು ಯತ್ನ ಮಾಡಿರುವುದರಿಂದ ಪ್ರಾಣಭಯದಿಂದ ಠಾಣೆಗೆ ಬಂದು ದೂರು ನೀಡಿದ್ದೇನೆ, ದಯವಿಟ್ಟು ಕಾನೂನು ಮುಖಾಂತರ ನನಗೆ ನ್ಯಾಯ ಕೊಡಿಸಿ, ನನಗೆ ಏನಾದರೂ ತೊಂದರೆಯಾದರೆ ಮಧುಕುಮಾರ್ ಹಾಗೂ ಅಭಿಷೇಕ್ಗೌಡ ಇವರೇ ಕಾರಣರಾಗಿರುತ್ತಾರೆ. ಇವರುಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಕಾನೂನಿನಂತೆ ಶಿಕ್ಷೆ ನೀಡಬೇಕೆಂದು ಸುನೀಲ್ ಕುಮಾರ್ ತಿಳಿಸಿದ್ದಾರೆ.