ದಿವಂಗತ ಅನಂತಕುಮಾರ್ ಅವರ ಪತ್ನಿಗೆ ಜನಾಭಿಪ್ರಾಯ ಇದ್ದರೂ ಟಿಕೆಟ್ ನೀಡದೆ ತೇಜಸ್ವಿ ಸೂರ್ಯನಿಗೆ ಕೊಟ್ಟರು. ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ನೀಡುವ ಮೂಲಕ ನಿಜವಾಗಿ ಬ್ರಾಹ್ಮಣ ಸಮುದಾಯಕ್ಕೆ ಮೋಸ ಮಾಡಿದ್ದೇ ಬಿಜೆಪಿ ಪಕ್ಷ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹರಿಹಾಯ್ದರು.
ಮಂಡ್ಯ ತಾಲ್ಲೂಕಿನ ಸಿದ್ದಯ್ಯನಕೊಪ್ಪಲು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಪ್ರಹ್ಲಾದ ಜೋಶಿ ವಿರುದ್ಧ ಮಾತನಾಡಿದ್ದಾರೆಯೇ ಹೊರತು ಬ್ರಾಹ್ಮಣ ಸಮುದಾಯದ ವಿರುದ್ಧ ಮಾತನಾಡಿಲ್ಲ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿ 25 ಕೋಟಿ ಹಣ ನೀಡಿದ್ದರು. ಬ್ರಾಹ್ಮಣ ಸಮುದಾಯದ ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಬೆಂಗಳೂರಿನ ಪದ್ಮನಾಭ ನಗರದಲ್ಲಿ ಅರ್ಧ ಎಕರೆ ಜಮೀನು ನೀಡಿ, ಆ ಜನಾಂಗದ ಪರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕುಮಾರಸ್ವಾಮಿಯವರು ಪ್ರಹ್ಲಾದ ಜೋಶಿಯನ್ನು ಸಿಎಂ ಹುದ್ದೆಗೆ ತರಲು ನಡೆಸಿರುವ ತಂತ್ರಗಾರಿಕೆಯ ಬಗ್ಗೆ ಮಾತನಾಡಿದ್ದಾರೆಯೇ ಹೊರತು, ಬ್ರಾಹ್ಮಣ ಸಮುದಾಯದ ವಿರುದ್ಧ ಅಲ್ಲ ಎಂದು ಸಮರ್ಥಿಸಿಕೊಂಡರು.
ಶೃಂಗೇರಿ ಮಠದ ಪೂಜೆ ಇಲ್ಲದೆ ನಮ್ಮ ಪಕ್ಷದ ಯಾವುದೇ ಕಾರ್ಯಕ್ರಮಗಳು ಪ್ರಾರಂಭವಾಗುವುದಿಲ್ಲ. ಹೀಗಿರುವಾಗ ಕುಮಾರಸ್ವಾಮಿ ಅವರನ್ನು ಬ್ರಾಹ್ಮಣ ವಿರೋಧಿ ಎಂಬಂತೆ ಬಿಂಬಿಸಲು ಹೊರಟಿರುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಇಂಡವಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಸ್ವಾಮಿ, ಸದಸ್ಯ ರಮೇಶ್ ರಾಜು, ಮುಖಂಡರಾದ ಎಸ್. ಟಿ. ಸಿದ್ದೇಗೌಡ, ಹನುಮಂತು, ತಿಮ್ಮೇಗೌಡ, ಎಸ್.ಎನ್. ಯೋಗೇಶ್, ಎಸ್. ಎಲ್. ಶಿವಣ್ಣ, ಕರೀಗೌಡ, ಗುತ್ತಿಗೆದಾರರಾದ ರವಿಕುಮಾರ್, ಯತಿರಾಜು, ನವೀನ್ ಕುಮಾರ್, ರೈತ ಮುಖಂಡರಾದ ಸಿದ್ದೇಗೌಡ ಇಂಡುವಾಳು ಚಂದ್ರಶೇಖರ್, ಸಿಮೆಂಟ್ ಸಿದ್ದೇಗೌಡ ಮತ್ತಿತರರಿದ್ದರು.