ಕರ್ನಾಟಕದಲ್ಲಿ ನೂತನವಾಗಿ ಅಧಿಕಾರ ಬಂದ ಕಾಂಗ್ರೆಸ್ ಪಕ್ಷವು ತಾನು ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ಹೆಚ್ಚಿನ ಕಂಡಿಷನ್ಗಳಿಲ್ಲದೆ ಜಾರಿಗೊಳಿಸಲು ಮುಂದಾಗಿದೆ. ಜುಲೈ 1 ರಿಂದ ಪ್ರತಿಯೊಂದು ಕುಟುಂಬಕ್ಕೆ 200 ಯೂನಿಟ್ವರೆಗೂ ಉಚಿತ ವಿದ್ಯುತ್ ನೀಡಲಾಗುವುದು. ಆಗಸ್ಟ್ 15 ರಂದು ಮನೆಯೊಡತಿಯ ಖಾತೆಗೆ 2,000 ರೂ ಜಮಾ ಮಾಡಲಾಗುವುದು. ಜುಲೈ 1 ರಿಂದ ಬಿಪಿಎಲ್ ಕಾರ್ಡುದಾರರಿಗೆ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು. ಜೂನ್ 11 ರಂದು ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗುವುದು. 2022-23 ರಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದವರಿಗೆ 24 ತಿಂಗಳುಗಳವರೆಗೆ ಪ್ರತಿ ತಿಂಗಳಿಗೆ 3000 ರೂ ನೀಡಲಾಗುವುದು ಎಂದು ಸಿಎಂStalin ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ಯೋಜನೆಗಳ ಜಾರಿಗೆ ವಾರ್ಷಿಕ ಅಂದಾಜು 50,000 ಕೋಟಿ ರೂಗಳು ಅಗತ್ಯ ಬೀಳುತ್ತದೆ ಎಂದು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಬಡವರಿಗೆ ಈ ಯೋಜನೆಗಳನ್ನು ಜಾರಿಗೊಳಿಸಿದರೆ ರಾಜ್ಯದ ಅಭಿವೃದ್ದಿ ಕುಂಠಿತಗೊಳ್ಳುತ್ತದೆ, ರಾಜ್ಯ ದಿವಾಳಿಯಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈಗಾಗಲೇ 5-6 ವರ್ಷಗಳಿಂದ ಇದೇ ಮಾದರಿಯ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ದಕ್ಷಿಣದ ಇತರೆ ರಾಜ್ಯಗಳಾದ ತಮಿಳುನಾಡು, ಆಂಧ್ರ, ತೆಲಂಗಾಣಗಳ ಆರ್ಥಿಕ ಪರಿಸ್ಥಿತಿ ನೋಡಿದರೆ ಅವು ದಿವಾಳಿಯಾಗಿಲ್ಲ ಎಂಬುದು ಮನದಟ್ಟಾಗುತ್ತದೆ. ಹಾಗಾಗಿ ಅವರು ನೀಡಿರುವ ಕಲ್ಯಾಣ ಯೋಜನೆಗಳು ಯಾವುವು? ಅವುಗಳಿಗೆ ತಗುಲಿದ ವೆಚ್ಚವೆಷ್ಟು ಎಂಬುದನ್ನು ನೋಡೋಣ.
ತಮಿಳುನಾಡು
ಸದ್ಯ ಆಡಳಿತದಲ್ಲಿರುವ ಸಿಎಂ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು 2021ರ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಅರ್ಹ ಮನೆಯ ಮನೆಯೊಡತಿಗೆ ತಿಂಗಳಿಗೆ 1000 ರೂ ನೀಡುವ ಯೋಜನೆಯನ್ನು ಈ ವರ್ಷದ ಸೆಪ್ಟಂಬರ್ನಿಂದ ಜಾರಿಗೊಳಿಸಲು ಮುಂದಾಗಿದೆ. ಅಲ್ಲದೇ ಶಾಲೆಗಳಲ್ಲಿ ಮಕ್ಕಳಿಗೆ ಬೆಳಗಿನ ತಿಂಡಿ ನೀಡುವ ಯೋಜನೆ ಜಾರಿಗೊಳಿಸಿದೆ.
ತೆಲಂಗಾಣ
ತೆಲಂಗಾಣವು ಮೇ 2018 ರಿಂದ ರೈತರಿಗಾಗಿ ‘ರೈತ ಬಂಧು’ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಪ್ರತಿ ಬೆಳೆ ಋತುವಿಗೆ ಪ್ರತಿ ಎಕರೆಗೆ 4,000 ರೂಪಾಯಿಗಳ “ಹೂಡಿಕೆ ಬೆಂಬಲ” ವನ್ನು ನೀಡುತ್ತಿದ್ದು, 2019-20 ರಿಂದ ನೀಡುತ್ತಿದ್ದು, 5,000 ರೂಗಳಿಗೆ ಹೆಚ್ಚಿಸಲಾಗಿದೆ. ಕೆ ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರವು ಈ ಯೋಜನೆಗಾಗಿ 10 ಋತುಗಳಲ್ಲಿ ಒಟ್ಟು 65,559 ಕೋಟಿ ರೂಪಾಯಿಗಳನ್ನು ರೈತರಿಗೆ ವಿತರಿಸಿದೆ. ಈ ಹಣವನ್ನು ರಾಜ್ಯದ ಸುಮಾರು 65 ಲಕ್ಷ ಭೂಮಿ ಹೊಂದಿದ ರೈತರ ಆಧಾರ್-ಸೀಡ್ ಖಾತೆಗಳಿಗೆ ಜಮಾ ಮಾಡಲಾಗಿದೆ.
ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವು 2019ರಿಂದ ಪಿಎಂ ಕಿಸಾನ್ ಸನ್ಮಾನ್ ನಿಧಿ ಯೋಜನೆಯನ್ನು ಜಾರಿಗೊಳಿಸಿರುವುದನ್ನು ನೋಡಬಹುದು. ಅದರಂತೆ ರೈತರು ವಾರ್ಷಿಕ 6,000 ರೂಗಳ ನೆರವು ಪಡೆಯುತ್ತಿದ್ದಾರೆ.
ಇನ್ನು ತೆಲಂಗಾಣದಲ್ಲಿ ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ಬೀಡಿ ಕಟ್ಟುವವರಿಗೆ ಮತ್ತು ನೀರಾ ಇಳಿಸುವವರಿಗೆ ಆಸರಾ ಪಿಂಚಣಿ ಹೆಸರಿನಲ್ಲಿ ಮಾಸಿಕ 2,016 ರೂಗಳ ಪಿಂಚಣಿ ನೀಡಲಾಗುತ್ತಿದೆ. ವಿಕಲಚೇತನರಿಗೆ ಮಾಸಿಕ 3,016 ರೂ ನೀಡಲಾಗುತ್ತಿದೆ. ರೈತ ಬಿಮಾ (5 ಲಕ್ಷ ರೂ ರಕ್ಷಣೆಯೊಂದಿಗೆ ಗುಂಪು ಜೀವ ವಿಮೆ) ಮತ್ತು ರೈತರಿಗೆ ಸಾಲ ಪರಿಹಾರ ನೀಡುತ್ತಿದೆ. ಜೊತೆಗೆ ಕಲ್ಯಾಣ ಲಕ್ಷ್ಮಿ/ಶಾದಿ ಮುಬಾರಕ್ ಯೋಜನೆ ಹೆಸರಿನಲ್ಲಿ ಪರಿಶಿಷ್ಟ ಜಾತಿಗಳು/ಪಂಗಡಗಳು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನವವಿವಾಹಿತ ವಧುಗಳಿಗೆ 1,00,116 ರೂ ಒಂದು ಬಾರಿಯ ಅನುದಾನ ನೀಡಲಾಗುತ್ತಿದೆ. ರೈತ ಬಂಧು ಹೊರತುಪಡಿಸಿ ಸುಮಾರು 45 ಲಕ್ಷ ಫಲಾನುಭವಿಗಳುಳ್ಳ ಈ ಎಲ್ಲಾ ಯೋಜನೆಗಳಿಗಾಗಿ ಒಟ್ಟು 78,965 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಆಂಧ್ರ ಪ್ರದೇಶ
ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿಯವರ ಸರ್ಕಾರವು ರೈತ ಭರೋಸ ಎಂಬ ಯೋಜನೆ ಜಾರಿಗೊಳಿಸಿದೆ. ಪ್ರತಿ ರೈತರಿಗೆ ವಾರ್ಷಿಕ 7,500 ರೂಗಳನ್ನು ನೀಡುತ್ತಿದೆ. ಈ ಯೋಜನೆಗಾಗಿ ಇದುವರೆಗೂ 27,062 ಕೋಟಿ ರೂ ಖರ್ಚು ಮಾಡಿದೆ.
ವೈ.ಎಸ್ ಜಗನ್ ಮೋಹನ್ ರೆಡ್ಡಿಯವರ ಅಧಿಕಾರಕ್ಕೆ ಬಂದ 4 ವರ್ಷಗಳಲ್ಲಿ ಕಣುಕಾ ಹೆಸರಿನಲ್ಲಿ ವೃದ್ಧರು ಮತ್ತು ಇತರ ದುರ್ಬಲ ವರ್ಗಗಳಿಗೆ ವೈಎಸ್ಆರ್ ಪಿಂಚಣಿಗಾಗಿ ಆಂಧ್ರ ಸರ್ಕಾರ 70,318 ಕೋಟಿ ರೂಗಳನ್ನು ಖರ್ಚು ಮಾಡಿದೆ. ಮಹಿಳಾ ಸ್ವ-ಸಹಾಯ ಗುಂಪುಗಳಿಗೆ 36,922 ಕೋಟಿ ರೂ ಸಹಾಯಧನ ವಿತರಿಸಲಾಗಿದೆ.
ಜಗನಣ್ಣ ಅಮ್ಮವೋಡಿ ಯೋಜನೆಯಡಿ ಕಡಿಮೆ ಆದಾಯದ ಕುಟುಂಬಗಳ 1-12 ನೇ ತರಗತಿಯ ಶಾಲಾ ಮಕ್ಕಳ ತಾಯಂದಿರಿಗೆ ವಾರ್ಷಿಕ 15,000 ರೂಗಳನ್ನು ನೀಡಲಾಗುತ್ತಿದ್ದು, ಇದರಿಂದ 19,674 ಕೋಟಿ ರೂ ಖರ್ಚಾಗಿದೆ. ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಶುಲ್ಕವನ್ನು ಮರುಪಾವತಿಸಲು ಜಗನಣ್ಣ ವಿದ್ಯಾ ದೀವೆನಾ ಯೋಜನೆಯಡಿ 9,947 ಕೋಟಿ ರೂಗಳನ್ನು ವ್ಯಯಿಸಲಾಗಿದೆ. ಡಾ ವೈಎಸ್ಆರ್ ಆರೋಗ್ಯಶ್ರೀ ರೂ 5-ಲಕ್ಷ/ಕುಟುಂಬ/ವರ್ಷ ನಗದು ರಹಿತ ಆರೋಗ್ಯ ವಿಮೆಗಾಗಿ 8,845 ಕೋಟಿ ರೂ ವೆಚ್ಚ ಮಾಡಲಾಗಿದೆ.
ಒಟ್ಟಾರೆಯಾಗಿ ಆಂಧ್ರಪ್ರದೇಶ ರಾಜ್ಯವು ಈ ನಾಲ್ಕು ವರ್ಷಗಳಲ್ಲಿ 2,10,177 ಕೋಟಿ ರೂಗಳನ್ನು ನೇರ ಫಲಾನುಭವಿಗಳಿಗೆ ವರ್ಗಾವಣೆ ಯೋಜನೆಗಳಿಗೆ ಬಳಸಿದೆ. ಅಲ್ಲದೇ ಅದು ಸಮುದಾಯವಾರು ಖರ್ಚಿನ ವಿವರದ ಲೆಕ್ಕ ಸಹ ಇಟ್ಟಿದೆ. ರೂ 99,141 ಕೋಟಿ ಹಿಂದುಳಿದ ಸಮುದಾಯಗಳಿಗೆ, ರೂ 34,921 ಕೋಟಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ, ರೂ 20,460 ಕೋಟಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ, ರೂ 11,886 ಕೋಟಿ ಅಲ್ಪಸಂಖ್ಯಾತರಿಗೆ ಮತ್ತು ಇತರರಿಗೆ 33,403 ಕೋಟಿ ರೂ ವಿನಿಯೋಗಿಸಲಾಗಿದೆ ಎಂದು ಹೇಳಿದೆ.
ಈ ರಾಜ್ಯಗಳು ಮಾತ್ರವಲ್ಲದೇ ದೆಹಲಿ ಸರ್ಕಾರ 200 ಯೂನಿಟ್ವರೆಗೂ ಉಚಿತ ವಿದ್ಯುತ್, ಉಚಿತ ಶಿಕ್ಷಣ, ಆರೋಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ ಯೋಜನೆಗಳನ್ನು ಜಾರಿಗೊಳಿಸಿದೆ. ಪಂಜಾಬ್ ರಾಜ್ಯವು 300 ಯೂನಿಟ್ವರೆಗೂ ಉಚಿತ ವಿದ್ಯುತ್ ನೀಡುತ್ತಿದೆ. ಈ ಯಾವ ರಾಜ್ಯಗಳು ಸಹ ಆರ್ಥಿಕವಾಗಿ ದಿವಾಳಿಯಾಗಿಲ್ಲ ಎಂಬುದನ್ನು ಗಮನಿಸಬೇಕು.
ಭ್ರಷ್ಟಾಚಾರವನ್ನು ಸಂಪೂರ್ಣ ತಡೆಗಟ್ಟಿದರೆ, ಸೋರಿಕೆ ನಿಲ್ಲಿಸಿದರೆ ರಾಜ್ಯದ ಬೊಕ್ಕಸದ ಹಣ ಉಳಿಯುತ್ತದೆ. “ಒಂದು ಫ್ಲೈ ಓವರ್ ಕಟ್ಟಲು 3,000 ಕೋಟಿ ಟೆಂಡರ್ ಇದ್ದರೆ ದೆಹಲಿ ಸರ್ಕಾರ ಅದನ್ನು ಕೇವಲ 2,200 ಕೋಟಿ ರೂಗಳಲ್ಲಿ ಕಟ್ಟುತ್ತೇವೆ. ಉಳಿದ 800 ಕೋಟಿ ಹಣವನ್ನು ಈ ಉಚಿತ ಯೋಜನೆಗಳಿಗೆ ವಿನಿಯೋಗಿಸುತ್ತೇವೆ” ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಇನ್ನು ಜನತೆ ಉಚಿತ ಯೋಜನೆಗಳಿಂದ ತಮಗೆ ಉಳಿತಾಯವಾದ ಹಣವನ್ನು ಇತರೆಡೆ ಬಳಸುತ್ತಾರೆ. ಇದರಿಂದ ಉತ್ಪಾದನೆ, ಉದ್ಯೋಗ ಸೃಷ್ಟಿ, ತೆರಿಗೆ ಸಂಗ್ರಹ, ಜಿಡಿಪಿ ಹೆಚ್ಚಳವಾಗುತ್ತದೆ. ಈ ಸರಪಳಿಯು ರಾಜ್ಯದ ಆರ್ಥಿಕತೆಯನ್ನು ಮೇಲೆತ್ತುತ್ತದೆಯೇ ಹೊರತು ಕೆಳಗಿಳಿಸುವುದಿಲ್ಲ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಇನ್ನು ರಾಜ್ಯದ ಅಭಿವೃದ್ದಿ ಕುಂಠಿತಗೊಳ್ಳುತ್ತದೆ ಎಂದು ಕೆಲವರು ಆರೋಪಿಸುತ್ತಾರೆ. ಅವರ ಪ್ರಕಾರ ರಾಜ್ಯವೆಂದರೆ ಅಲ್ಲಿ ವಾಸಿಸುವ ಜನರಲ್ಲವೇ? ಜನರಿಗೆ ಒಳ್ಳೇಯದಾದರೆ ಅದು ರಾಜ್ಯಕ್ಕೆ ಒಳ್ಳೇಯದು ತಾನೇ?
ಇನ್ನು ನಾವು ಕಟ್ಟುವ ತೆರಿಗೆ ಉಚಿತ ಯೋಜನೆಗಳಿಗೆ ಹೋಗುತ್ತದೆ ಎಂದು ಮೇಲ್ವರ್ಗದವರು ಹಲುಬುವುದು ಸಹ ತಪ್ಪಾದ ಕಥನವಾಗಿದೆ. ಏಕೆಂದರೆ 2021-22ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಯಾಗಿ ಭಾರತೀಯರು ಪಾವತಿಸಿದ 6.73 ಲಕ್ಷ ಕೋಟಿ ರೂಗಳಿಗೆ ಹೋಲಿಸಿದರೆ, ಪರೋಕ್ಷ ತೆರಿಗೆಯಿಂದ 20.73 ಲಕ್ಷ ಕೋಟಿ ರೂ ಸಂಗ್ರಹಿಸಲಾಗಿದೆ. ಅಂದರೆ ಈ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಡವರು ಮತ್ತು ಮಧ್ಯಮ ವರ್ಗದವರು ಕಟ್ಟುವ ಪರೋಕ್ಷ ತೆರಿಗೆಯ ಪಾಲು ಬೃಹತ್ ಪ್ರಮಾಣದಲ್ಲಿದೆ. ಅಂದರೆ ಬಡವರ ತೆರಿಗೆ ದುಡ್ಡನ್ನು ಅವರಿಗಾಗಿ ಬಳಸುವುದು ಸರಿಯಾದ ಕ್ರಮವಾಗಿದೆ. ಹಾಗಾಗಿ ಕಲ್ಯಾಣ ಯೋಜನೆಗಳನ್ನು ಉಚಿತ ಯೋಜನೆಗಳು ಎಂದು ಕರೆಯಬಾರದು, ಅವುಗಳು ಜನರ ಹಕ್ಕು ಎಂಬ ವಾದ ಸಹ ಆರಂಭವಾಗಿದೆ.