✍️ ಶಿವಸುಂದರ್
ಹೊಲಗದ್ದೆಗಳು ಸೋಮಾರಿಗಳ
ಅಡ್ಡೆಗಳು ..
ಮಾಲುಗಳು ಬಾರುಗಳು
ಬೆವರು ಬಸಿಯುವ ಕೇಂದ್ರಗಳು..
ಕುಬೇರರ ಭಾನುವಾರಗಳು
ವಿರಾಮ ಆರ್ಥಿಕತೆಯ ವಯಾಗ್ರಾಗಳು ..
ದುಡಿದುಣ್ಣುವರ ರಜೆಗಳು
ಸೋಮಾರಿತನದ ದೇಶದ್ರೋಹಗಳು ..
ಕೆಲಸ ಮಾಡುವುದು ಕರ್ತವ್ಯ..
ಕೂಲಿ ಕೊಡುವುದು ಔದಾರ್ಯ ..
ಕಾರ್ಪೊರೇಟು ಕಳ್ಳರಿಗೆ
ಕೊಟ್ಟ ಪುಕ್ಕಟೆ ಕೊಪ್ಪರಿಗೆ
ಅಭಿವೃದ್ಧಿ ಆರ್ಥಿಕತೆ ..
ಬೆವರನ್ನೂ ಕೊಟ್ಟು
ತೆರಿಗೆಯನ್ನೂ ಕಟ್ಟಿದವರ ಪಾಲು
ಚಿಟಿಕೆಯಷ್ಟು
ಮರಳಿಕೊಟ್ಟರೆ
ದಿವಾಳಿ ಆರ್ಥಿಕತೆ ..
ಕುಬೇರರ ಹಗಲು ದರೋಡೆಯೇ
ಅರ್ಥಶಾಸ್ತ್ರವಾದ ದೇಶದಲ್ಲಿ ..
ಗುಡಿಸಲುಗಳ ನರಮೇಧವು
ತತ್ವಶಾಸ್ತ್ರವಾಗುತ್ತದೆ!
ಹಂಚಿ ತಿನ್ನುವುದು
ಕೂಡಿ ಬಾಳುವುದು
ಅಧರ್ಮವಾಗುತ್ತದೆ ..